ಗುವಾಹಟಿ: ಹಾಲಿ ಚಾಂಪಿಯನ್ ಕರ್ನಾಟಕದ ಮಿಥುನ್ ಮಂಜುನಾಥ್ ಇಲ್ಲಿ ನಡೆಯುತ್ತಿರುವ 85ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಿಥುನ್ 21-17, 22-20 ರಿಂದ ಭಾರ್ಗವ್ ಸೋಮಸುಂದರ ವಿರುದ್ಧ ಗೆಲುವು ಸಾಧಿಸಿದರು. ಅವರು ಮುಂದಿನ ಸುತ್ತಿನಲ್ಲಿ ಕಿರಣ್ ಜಾರ್ಜ್ ಅವರನ್ನು ಎದುರಿಸುವರು.
ವಿಶ್ವ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ 21-16, 21-11 ರಿಂದ ಅಭಿಷೇಕ್ ಸೈನಿ ಎದುರು ಜಯ ಗಳಿಸಿದರು. ಅವರು ಕ್ವಾರ್ಟರ್ನಲ್ಲಿ ಭರತ್ ರಾಘವ್ ವಿರುದ್ಧ ಸೆಣಸಾಡುವರು.
ಮಹಿಳೆಯರ ಸಿಂಗಲ್ಸ್ನಲ್ಲಿ ತೆಲಂಗಾಣದ ಉದಯೋನ್ಮುಖ ಆಟಗಾರ್ತಿ ಶ್ರೀಯಾನ್ಶಿ ವಾಲಿಶೆಟ್ಟಿ 18-21, 21-13, 21-17 ರಿಂದ ಹಾಲಿ ಚಾಂಪಿಯನ್ ಅನುಪಮಾ ಉಪಾಧ್ಯಾಯ ಅವರನ್ನು ಮಣಿಸಿದರು. 16 ವರ್ಷದ ಶ್ರೀಯಾನ್ಶಿ, ಮೊದಲ ಗೇಮ್ ಸೋತರು. ನಂತರ ಲಯ ಕಂಡುಕೊಂಡ ಅವರು, ಸತತ ಎರಡು ಗೇಮ್ ಗೆದ್ದು ವಿಶ್ವ ಜೂನಿಯರ್ ಮಾಜಿ ಅಗ್ರಶ್ರೇಯಾಂಕಿತ ಆಟಗಾರ್ತಿಗೆ ಆಘಾತ ನೀಡಿದರು.
ಶ್ರೀಯಾನ್ಶಿ ಕ್ವಾರ್ಟರ್ ಫೈನಲ್ನಲ್ಲಿ ಇಶಾರಾಣಿ ಬರುವಾ ಅವರನ್ನು ಎದುರಿಸಲಿದ್ದಾರೆ. ಇಶಾರಾಣಿ 16 ಘಟ್ಟದ ಪಂದ್ಯದಲ್ಲಿ 21-11, 21-13 ರಿಂದ ಮಹಾರಾಷ್ಟ್ರದ ರುಚಾ ಸಾವಂತ್ ಅವರನ್ನು ಮಣಿಸಿದರು.
ಅಗ್ರ ಶ್ರೇಯಾಂಕದ ಆಕರ್ಷಿ ಕಶ್ಯಪ್ ಮತ್ತು ಅಸ್ಸಾಂನ ಅಷ್ಮಿತಾ ಚಲಿಹಾ ನಿರಾಯಾಸವಾಗಿ ಮುನ್ನಡೆದರು. ಆಕರ್ಷಿ 21-9, 21-13ರಿಂದ ರಾಜಸ್ಥಾನದ ಸಾಕ್ಷಿ ಫೋಗಟ್ ವಿರುದ್ಧ; ಅಷ್ಮಿತಾ 21-15, 21-10 ರಿಂದ ಆಂಧ್ರಪ್ರದೇಶದ ಸೂರ್ಯ ಚರಿಷ್ಮಾ ವಿರುದ್ಧ ಜಯಗಳಿಸಿದರು. ಅವರಿಬ್ಬರು ಮುಂದಿನ ಸುತ್ತಿನಲ್ಲಿ ಕ್ರಮವಾಗಿ ತನ್ವಿ ಶರ್ಮಾ ಮತ್ತು ಮೇಘನಾ ರೆಡ್ಡಿ ಅವರನ್ನು ಎದುರಿಸುವರು.
ಪುರುಷರ ಡಬಲ್ಸ್ನಲ್ಲಿ ಅಗ್ರಶ್ರೇಯಾಂಕದ ಕೃಷ್ಣ ಪ್ರಸಾದ್- ವಿಷ್ಣುವರ್ಧನ್ ಗೌಡ್ ಪಂಜಾಲ ಮತ್ತು ಹರಿಹರನ್ ಅಂಶಕರುಣನ್- ರುಬನ್ ಕುಮಾರ್ ಜೋಡಿಯು ಎಂಟರ ಘಟ್ಟ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.