ಚೆನ್ನೈ: ಭಾರತದ ಡಿ.ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ವಿದಿತ್ ಸಂತೋಷ್ ಗುಜರಾತಿ ಅವರು ಆನ್ಲೈನ್ ಮೂಲಕ ನಡೆಯುತ್ತಿರುವ ಏಮ್ಚೆಸ್ ರ್ಯಾಪಿಡ್ ಚೆಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ಗೆ ಆಘಾತ ನೀಡಿದ್ದ ಗುಕೇಶ್ ಮತ್ತು ಅರ್ಜುನ್ ಅವರು ಪ್ರಿಲಿಮಿನರಿ ಹಂತದಲ್ಲಿ ಕ್ರಮವಾಗಿ ಎರಡು ಹಾಗೂ ನಾಲ್ಕನೇ ಸ್ಥಾನ ಗಳಿಸಿದರು. ವಿದಿತ್ ಗುಜರಾತಿ ಎಂಟನೇ ಸ್ಥಾನ ಪಡೆದರು.
ನಾಕೌಟ್ ಹಂತದಲ್ಲಿ ಅರ್ಜುನ್ ಅವರು ಕಾರ್ಲ್ಸನ್ ಜತೆ ಪೈಪೋಟಿ ನಡೆಸಲಿದ್ದಾರೆ. ಗುಕೇಶ್ ಅವರು ಹಂಗರಿಯ ರಿಚರ್ಡ್ ರಾಪೋರ್ಟ್ ಎದುರು ಹಾಗೂ ವಿದಿತ್, ಪೋಲೆಂಡ್ನ ಜಾನ್ ಕ್ರಿಸ್ಟಾಫ್ ದುಡಾ ವಿರುದ್ಧ ಸೆಣಸಾಡಲಿದ್ದಾರೆ.
ಪ್ರಿಲಿಮಿನರಿ ಹಂತದಲ್ಲಿ ದುಡಾ ಅವರು 28 ಪಾಯಿಂಟ್ಸ್ಗಳೊಂದಿಗೆ ಅಗ್ರಸ್ಥಾನ ಪಡೆದರು. ಗುಕೇಶ್, ಶಕ್ರಿಯಾರ್ ಮಮೆದ್ಯರೊವ್ ಮತ್ತು ಅರ್ಜುನ್ ತಲಾ 27 ಪಾಯಿಂಟ್ಸ್ ಸಂಗ್ರಹಿಸಿದರು. 26 ಪಾಯಿಂಟ್ಸ್ ಪಡೆದ ಕಾರ್ಲ್ಸನ್ ಐದನೇ ಸ್ಥಾನ ತಮ್ಮದಾಗಿಸಿಕೊಂಡರು.
ಮಂಗಳವಾರ ನಡೆದ ಕೊನೆಯ ಸುತ್ತಿನಲ್ಲಿ ಭಾರತದ ಮೂವರೂ ಗೆಲುವು ಪಡೆದರು. ಗುಕೇಶ್ ಅವರು ರಾಪೋರ್ಟ್ ವಿರುದ್ಧ ಗೆದ್ದರೆ, ಅರ್ಜುನ್, ನೆದರ್ಲೆಂಡ್ಸ್ನ ಅನೀಶ್ ಗಿರಿ ಎದುರು ಜಯಿಸಿದರು. ವಿದಿತ್, ಸ್ಪೇನ್ನ ಡೇವಿಡ್ ಆ್ಯಂಟನ್ ಗ್ಯುಜಾರೊ ಅವರನ್ನು ಮಣಿಸಿದರು. ಕೊನೆಯ ಮೂರು ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ವಿದಿತ್ ನಾಕೌಟ್ ಹಂತ ಪ್ರವೇಶಿಸಿದ್ದಾರೆ.
ಕಣದಲ್ಲಿದ್ದ ಭಾರತದ ಇತರ ಇಬ್ಬರು ಸ್ಪರ್ಧಿಗಳಾದ ಪಿ.ಹರಿಕೃಷ್ಣ ಮತ್ತು ಆದಿತ್ಯ ಮಿತ್ತಲ್ ಅವರು ಪ್ರಿಲಿಮಿನರಿ ಹಂತದಲ್ಲಿ ಕ್ರಮವಾಗಿ 13 ಹಾಗೂ 15ನೇ ಸ್ಥಾನ ಪಡೆದು ನಾಕೌಟ್ ಹಂತ ಪ್ರವೇಶಿಸಲು ವಿಫಲರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.