ಹುಬ್ಬಳ್ಳಿ: ಮೊದಲ ಎರಡೂ ಸುತ್ತಿನ ಪಂದ್ಯಗಳಲ್ಲಿ ಗೆಲುವು ಪಡೆದ ಗ್ರ್ಯಾಂಡ್ಮಾಸ್ಟರ್ ಎಂ.ಎಸ್. ತೇಜಕುಮಾರ್ ಇಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ಓಪನ್ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಧಾರವಾಡ ಜಿಲ್ಲಾ ಚೆಸ್ ಸಂಸ್ಥೆ, ರೋಟರಿ ಕ್ಲಬ್ ಹುಬ್ಬಳ್ಳಿ ಉತ್ತರ ಮತ್ತು ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದದ ಸಹಯೋಗದಲ್ಲಿ ನಡೆಯುತ್ತಿರುವ ಐದು ದಿನಗಳ ಟೂರ್ನಿಯಲ್ಲಿ ಒಟ್ಟು 250 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಒಟ್ಟು ಒಂಬತ್ತು ಸುತ್ತುಗಳ ಟೂರ್ನಿ ಇದಾಗಿದೆ.
ಮೊದಲ ಸುತ್ತಿನ ಪಂದ್ಯದಲ್ಲಿ ತೇಜಕುಮಾರ್ ತಮ್ಮ ಅನುಭವದ ಬಲ ಬಳಸಿಕೊಂಡು ಚಾಣಾಕ್ಷ ನಡೆಗಳ ಮೂಲಕ ಅನ್ಸಿಕಾ ಶೆರ್ಲಿ ಪಿಂಟೊ ಎದುರು ಸುಲಭ ಜಯ ಪಡೆದರು. ಎರಡನೇ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್ ಪ್ರಭು ಜಯ ಅವರನ್ನು ಮಣಿಸಿದರು.
ಮೊದಲ ಸುತ್ತಿನ ಇನ್ನಷ್ಟು ಪ್ರಮುಖ ಪಂದ್ಯಗಳಲ್ಲಿ ಕರ್ನಾಟಕದ ಡಿ. ಯಶಸ್, ಸ್ಥಳೀಯ ಪ್ರತಿಭೆ ಅರ್ಚನಾ ಎಸ್. ಇಂದ್ರಾಳಿ ಮೇಲೂ, ನವಲಗುಂದ ನಿರಂಜನ್–ಆರಿಧ್ಯಾ ಅಗರವಾಲ್ ಮೇಲೂ, ಗೋವಾದ ನೀರಜ್ ಸರಿಪಳ್ಳಿ ಕರ್ನಾಟಕದ ಅವಧಿ ಗುಪ್ತಾ ವಿರುದ್ಧವೂ, ರಾಜ್ಯದ ವಿನಾಯಕ ಕುಲಕರ್ಣಿ–ಎಚ್. ಅವ್ಯಕ್ತಾ ವಿರುದ್ಧವೂ, ಎಂ.ಎಚ್. ಸಂಜಯ್ ಶಿಂಧಿಯಾ–ಬಿ.ಜಿ. ಭುವನಾ ಮೇಲೂ, ಶ್ರೇಯಸ್ ಎ. ಕುಲಕರ್ಣಿ–ದರ್ಶಾ ರಾಮದುರ್ಗಾ ವಿರುದ್ಧವೂ ಗೆಲುವು ಸಾಧಿಸಿ ಮುನ್ನಡೆ ಗಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.