ಬೆಂಗಳೂರು: ಅಮೋಘ ಆಟವಾಡಿದ ಅನರ್ಘ್ಯ ಮಂಜುನಾಥ ಅವರು ಸಿ.ವಿ.ಎಲ್. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಭಾನುವಾರ ಪ್ರಶಸ್ತಿ ಜಯಿಸಿದರು. ಜೈನ್ ಕಾಲೇಜು ತಂಡದ ಅನರ್ಘ್ಯಾ ಸತತ ಮೂರನೇ ವರ್ಷ ಟ್ರೋಫಿಗೆ ಮುತ್ತಿಕ್ಕಿದರು. ಜೂನಿಯರ್ ಬಾಲಕರ ವಿಭಾಗದ ಪ್ರಶಸ್ತಿಯು ಸ್ಕೈಸ್ ಅಕಾಡೆಮಿಯ ಆಕಾಶ್ ಕೆ.ಜೆ. ಅವರ ಪಾಲಾಯಿತು.
ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ ಟೂರ್ನಿಯ ಜೂನಿಯರ್ ಬಾಲಕಿಯರಫೈನಲ್ ಪಂದ್ಯದಲ್ಲಿ ಅನರ್ಘ್ಯ 11–7, 11–8, 11–7, 9–11, 12–10ರಿಂದ ಯಶಸ್ವಿನಿ ಘೋರ್ಪಡೆ (ಸ್ಕೈಸ್) ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಅನರ್ಘ್ಯಾ 11 -8, 11 -4, 4 -11, 12 -14, 12-10, 11 -7ರಿಂದ ಕರುಣಾ ಗಜೇಂದ್ರನ್ (ಸ್ಕೈಸ್) ಅವರನ್ನು ಸೋಲಿಸಿದ್ದರು.
ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನ ಪಂದ್ಯದಲ್ಲಿ ಆಕಾಶ್ 11–8, 11–8, 10–12, 11–5, 12–10ರಿಂದ ಯಶವಂತ್.ಪಿ (ಪಿಎಸ್ಟಿಟಿಎ) ಅವರನ್ನು ಪರಾಭವಗೊಳಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಆಕಾಶ್ 11–7, 11–9, 12–14, 6–11, 11–6, 11–7ರಿಂದ ಸುಜನ್ ಆರ್. ಭಾರದ್ವಾಜ್ (ಡಬ್ಲ್ಯುಸಿಟಿಟಿಸಿ) ಅವರ ಸವಾಲು ಮೀರಿದ್ದರು.
ಯೂತ್ ಬಾಲಕರ ವಿಭಾಗದ ಪ್ರಶಸ್ತಿಗೂ ಆಕಾಶ್.ಕೆ.ಜೆ. ಒಡೆಯರಾದರು. ಫೈನಲ್ ಪಂದ್ಯದಲ್ಲಿ ಅವರು 7–11, 11–7, 11–6, 7–11, 11–7, 11–8ರಿಂದ ಬ್ಯಾಂಕ್ ಆಫ್ ಬರೋಡಾ ತಂಡದ ಸಮರ್ಥ್ ಕುರಡಿಕೇರಿ ಎದುರು ಜಯ ಸಾಧಿಸಿದರು. ಸೆಮಿಫೈನಲ್ ಹಣಾಹಣಿಯಲ್ಲಿ ಆಕಾಶ್ 11–5, 11–8, 11–5, 11–6ರಿಂದ ಯಶವಂತ್ ಪಿ. ಅವರನ್ನು ಸೋಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.