ನವದೆಹಲಿ: ಈ ವರ್ಷದ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವ ಬ್ಯಾಡ್ಮಿಂಟನ್ ಪಟು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರಿಗೆ ಕೋವಿಡ್ –19 ಸೋಂಕು ತಗುಲಿರುವುದು ಖಚಿತವಾಗಿದೆ.
ಅವರನ್ನು ಕಳೆದ ಒಂದು ವಾರದಿಂದ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. 20 ವರ್ಷದ ಡಬಲ್ಸ್ ಆಟಗಾರ ಸಾತ್ವಿಕ್ ಅವರಿಗೆ ಲಕ್ಷಣರಹಿತ ಸೋಂಕು ತಗುಲಿದೆ. ಹೋದ ಶನಿವಾರ ಪ್ರಕಟವಾಗಿದ್ದ ರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ಬ್ಯಾಡ್ಮಿಂಟನ್ ವಿಭಾಗದ ಅರ್ಜುನ ಪ್ರಶಸ್ತಿ ಸಾಲಿನಲ್ಲಿ ಸಾತ್ವಿಕ್ ಇದ್ದರು.
’ಹೌದು ಇದು ನಿಜಸಂಗತಿ. ಹೋದ ವಾರ ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಂಡಾಗ ಸೋಂಕು ಇರುವುದು ತಿಳಿದಿತ್ತು. ಐದು ದಿನಗಳಿಂದ ಪ್ರತ್ಯೇಕವಾಸದಲ್ಲಿದ್ದೇನೆ. ಆರ್ಟಿ–ಪಿಸಿಆರ್ ಟೆಸ್ಟ್ ನಲ್ಲಿಯೂ ಸೋಂಕು ಖಚಿತಪಟ್ಟಿದೆ ‘ ಎಂದು ಸಾತ್ವಿಕ್ ಹೇಳಿದ್ದಾರೆ .
ಹೈದರಾಬಾದ್ ಸಮೀಪದ ಅಮಲಾಪುರಂನಲ್ಲಿರುವ ತಮ್ಮ ಮನೆಯಲ್ಲಿಯೇ ಅವರು ಕ್ವಾರಂಟೈನ್ ಆಗಿದ್ದಾರೆ.
’ನಾನು ಔಷಧೋಪಚಾರ ಪಡೆಯುತ್ತಿದ್ದೇನೆ. ಇಲ್ಲಿಯವರೆಗೆ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ. ನನ್ನ ಪಾಲಕರು ಮತ್ತು ಸ್ನೇಹಿತರಲ್ಲಿಯೂ ವೈರಸ್ ಸೋಂಕು ಕಂಡುಬಂದಿಲ್ಲ. ಆದರೂ ನನಗೆ ಎಲ್ಲಿಂದ ಸೋಂಕು ತಗುಲಿತು ಎಂಬುದು ತಿಳಿಯುತ್ತಿಲ್ಲ‘ ಎಂದು ಹೇಳಿದ್ದಾರೆ.
ಅರ್ಜುನ ಮತ್ತು ಇತರ ರಾಷ್ಟ್ರೀಯ ಪುರಸ್ಕಾರಗಳ ಪ್ರದಾನ ಸಮಾರಂಭವನ್ನು ಈ ಬಾರಿ ಆನ್ಲೈನ್ (ವರ್ಚುವಲ್) ವೇದಿಕೆಯಲ್ಲಿ ನಡೆಸಲಾಗುತ್ತಿದೆ. ಶನಿವಾರ ಕಾರ್ಯಕ್ರಮ ನಡೆಯುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.