
ಮಂಗಳೂರಿನ ಉರ್ವದ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ 2025‘ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಅಮೆರಿಕದ ಇಷಿಕಾ ಜೈಸ್ವಾಲ್ ಅವರು ಭಾರತದ ಜೈನಾಬ್ ಸಯೀದ್ ಅವರನ್ನು ಸೋಲಿಸಿ ಪ್ರಿಕ್ವಾರ್ಟರ್ ಫೈನಲ್ ತಲುಪಿದರು
ಪ್ರಜಾವಾಣಿ ಚಿತ್ರ/ ಫಕ್ರುದ್ದೀನ್ ಎಚ್.
ಮಂಗಳೂರು: ಅಗ್ರಶ್ರೇಯಾಂಕದ ಋತ್ವಿಕ್ ಸಂಜೀವಿ ಸತೀಶ್ ಕುಮಾರ್, ಎಂಟನೇ ಶ್ರೇಯಾಂಕದ ಸನೀತ್ ದಯಾನಂದ್ ಸೇರಿದಂತೆ ಎಂಟು ಮಂದಿ ‘ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್– 2025’ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಬುಧವಾರ ಪ್ರಿ ಕ್ವಾರ್ಟರ್ ಫೈನಲ್ ತಲುಪಿದರು.
ಪುರುಷರ ಸಿಂಗಲ್ಸ್ನ 3ನೇ ಶ್ರೇಯಾಂಕದ ಆಟಗಾರ, ಕನ್ನಡಿಗ ಮಿಥುನ್ ಮಂಜುನಾಥ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿದರು.
ಇಲ್ಲಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಊರ್ಜಿತ್ ಛಾಲಿಯಾ, ಆರ್ಯಮಾನ್ ಟಂಡನ್, ನುಮೇರ್ ಶೇಖ್, ಎ.ಆರ್. ರೋಹನ್ ಕುಮಾರ್ ಆನಂದಾಸ್ ರಾಜ್ಕುಮಾರ್, ಶೌರ್ಯ ಗುಲ್ಲಯ್ಯ ಹಾಗೂ ಪ್ರಣಯ್ ಶೆಟ್ಟಿಗಾರ್ ಅವರೂ ಪ್ರಿಕ್ವಾರ್ಟರ್ ಫೈನಲ್ ತಲುಪಿದರು.
ಋತ್ವಿಕ್ ಸಂಜೀವಿ ಸತೀಶ್ ಕುಮಾರ್ ಅವರು ಜಿನ್ಪಾಲ್ ಸೊನ್ನ ಅವರನ್ನು 21–18, 15–21, 21–14ರಿಂದ ಸೋಲಿಸಿದರು.
ಸನೀತ್ ದಯಾನಂದ್ ಅವರು ಆದಿತ್ಯ ಗುಪ್ತ ಅವರನ್ನು 21–19, 21–13 ನೇರ ಗೇಮ್ಗಳಿಂದ ಮಣಿಸಿದರು. ಆರ್ಯಮಾನ್ ಟಂಡನ್ ಅವರು 21–12, 19–21, 21–14ರಿಂದ ಸಿದ್ಧಾರ್ಥ್ ಪ್ರತಾಪ್ ಸಿಂಗ್ ವಿರುದ್ಧ ಗೆದ್ದರು. ನುಮೇರ್ ಶೇಖ್ ಅವರು ಆದಿತ್ಯ ತ್ರಿಪಾಠಿ ವಿರುದ್ಧ 22–20, 21–15ರ ನೇರ ಗೇಮ್ಗಳಿಂದ ಗೆದ್ದರು. ಎ.ಆರ್. ರೋಹನ್ ಕುಮಾರ್ ಆನಂದಾಸ್ ರಾಜ್ಕುಮಾರ್ ಅವರು ಅಖಿಲ್ ರಾವ್ ಸೂರ್ಯನೇನಿ ವಿರುದ್ಧ 21–9, 21–17ರಿಂದ ಗೆದ್ದು ಬೀಗಿದರು.
ಪ್ರಣಯ್ ಶೆಟ್ಟಿಗಾರ್ ಅವರು ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಶಂಕರ್ ಸಾರಸ್ವತ್ ವಿರುದ್ಧ 22–10, 23–25, 21–11ರಿಂದ ಗೆದ್ದರು.
ಭಾರತದ ಊರ್ಜಿತ್ ಛಾಲಿಯಾ ಅವರು ಥಾಯ್ಲೆಂಡ್ನ ವರೋಟ್ ಉರಾಯ್ವಾಂಗ್ ಅವರನ್ನು 20–22, 21–5, 21–11ರಿಂದ ಸೋಲಿಸಿದರು. ಕೆನಡಾದ ಶೌರ್ಯ ಗುಲ್ಲಯ್ಯ ಅವರು ಭಾರತದ ಸಿದ್ಧಾರ್ಥ್ ಸಲಾರ್ ವಿರುದ್ಧ 21–18, 21–15ರಿಂದ ಗೆಲುವು ಸಾಧಿಸಿದರು.
ಮಹಿಳೆಯರ ಸಿಂಗಲ್ಸ್ನಲ್ಲಿ ಅಮೆರಿಕದ ಇಷಿಕಾ ಜೈಸ್ವಾಲ್ ಅವರು ಭಾರತದ ಜೈನಾಬ್ ಸಯೀದ್ ಅವರನ್ನು 21–14, 12–21, 21–15ರಿಂದ ಸೋಲಿಸಿದರು. 5ನೇ ಶ್ರೇಯಾಂಕದ ಅದಿತಿ ಭಟ್ ಅವರು ತನ್ವಿ ಪಟ್ರಿ ವಿರುದ್ಧ 4–21, 14–21ರಿಂದ ಸೋತು ಆಘಾತ ಅನುಭವಿಸಿದರು. ನವ್ಯಾ ಖಂಡೇರಿ ಅವರು 15–21, 21–15, 21–18ರಿಂದ ಗೆದ್ದರು.
ಡಯಾಂಕಾ ವಾಲ್ಡಿಯ ಅವರು 17–21, 21–10, 21–15ರಿಂದ ಆದ್ಯಾ ಶೈನ್ ವಿರುದ್ಧ ಗೆಲುವಿನ ನಗೆ ಬೀರಿದರು. ರುಜುಲಾ ರಾಮು ಅವರು 10ನೇ ಶ್ರೇಯಾಂಕದ ಯಶ್ವಿ ಭಟ್ ಅವರಿಗೆ 21– 13, 21–16 ರಿಂದ ಸೋಲಿನ ರುಚಿ ತೋರಿಸಿದರು.
ಕನ್ನಡಿಗ ಮಿಥುನ್ ಮಂಜುನಾಥ್ ಅವರನ್ನು ಆರ್ಯಮಾನ್ ಟಂಡನ್ ಅವರು ಮೊದಲ ಸುತ್ತಿನಲ್ಲಿ 11–21, 21–14, 21–17ರಿಂದ ಸೋಲಿಸಿದರು.
ಕರ್ನಾಟಕದ ಅನನ್ಯಾ ಪ್ರವೀಣ್ ಅವರ ಸವಾಲು ಕೂಡಾ ಮೊದಲ ಸುತ್ತಿನಲ್ಲೇ ಅಂತ್ಯವಾಯಿತು. ಪ್ರಶಂಸಾ ಬೋನಮ್ ವಿರುದ್ಧದ ಮೊದಲ ಗೇಮ್ನಲ್ಲಿ ಮುನ್ನಡೆ ಗಳಿಸಿದ್ದ ಅವರು ನಂತರ 21–17, 15–21, 19–21ರಿಂದ ಶರಣಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.