
ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಖಿಲ್ ರಾವ್ ಸೂರ್ಯನೇನಿ
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು: ಅಗ್ರ ಶ್ರೇಯಾಂಕದ ಹೇಮಂತ್ ಎಂ. ಗೌಡ ಮತ್ತು ಎರಡನೇ ಶ್ರೇಯಾಂಕದ ಉಮಾಮಹೇಶ್ವರ್ ರೆಡ್ಡಿ ಅವರು ಇಲ್ಲಿ ಮಂಗಳವಾರ ಆರಂಭವಾದ ‘ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್– 2025’ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾಲಿಫೈಯರ್ನ ಮೊದಲ ಸುತ್ತಿನಲ್ಲಿ ಆಘಾತ ಅನುಭವಿಸಿದರು.
ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ನ ಪಂದ್ಯದಲ್ಲಿ ಗೌತಮ್ ಗೌತಮ್ ವಾಲಿಯಾ 21–18, 21–16ರಿಂದ ಹೇಮಂತ್ ಅವರನ್ನು ಮಣಿಸಿದರು. ಶಿವಾಂಶ್ 21–13, 21–10ರಿಂದ ಉಮಾಮಹೇಶ್ವರ್ ಅವರನ್ನು ಹಿಮ್ಮೆಟ್ಟಿಸಿದರು.
ಮೂರನೇ ಶ್ರೇಯಾಂಕದ ಇರ್ವಿನ್ ಅರೋಕಿಯಾ ವಾಲ್ಟರ್ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 15–21, 21–19, 21–16ರಿಂದ ಮನೀಶ್ ಫೋಗಟ್ ಅವರನ್ನು ಮಣಿಸಿ ಕ್ವಾಲಿಫೈಯರ್ನ ಎರಡನೇ ಸುತ್ತು ಪ್ರವೇಶಿಸಿದರು. ಐದನೇ ಶ್ರೇಯಾಂಕದ ಅಂಶ್ ನೇಗಿ 21–14, 21–10ರಿಂದ ಶ್ರವಂತ್ ಸಾಯಿ ಸೂರಿ ಅವರನ್ನು ಸೋಲಿಸಿದರು.
ಎಂಟನೇ ಶ್ರೇಯಾಂಕದ ಆದಿತ್ಯ ದಿವಾಕರ್, ಒಂಬತ್ತನೇ ಶ್ರೇಯಾಂಕದ ಪ್ರಜ್ವಲ್ ಸೋನವಾನ್ ನಿರಾಯಾಸವಾಗಿ ಎರಡನೇ ಸುತ್ತು ತಲುಪಿದರು. ಆದಿತ್ಯ 21–13, 21–16ರಿಂದ ಅಥರ್ವ ಜೋಶಿ ವಿರುದ್ಧ; ಪ್ರಜ್ವಲ್ 21–18, 21–9ರಿಂದ ಹರ್ಷನ್ ತಡಿಪರ್ತಿ ವಿರುದ್ಧ ಗೆಲುವು ಸಾಧಿಸಿದರು. ಹತ್ತನೇ ಶ್ರೇಯಾಂಕದ ತನ್ಮೊಯ್ ಬಿಕಾಶ್ ಬೋರುವಾ16–21, 22–20, 21–9ರಿಂದ ಕ್ರಿಶ್ ದೇಸಾಯಿ ಅವರನ್ನು ಮಣಿಸಿದರು.
11ನೇ ಶ್ರೇಯಾಂಕದ ನವೀನ್ ರಾಜೇಂದ್ರನ್ ಅವರು ಚಿರಾಗ್ ಸೇತ್ ಎದುರು ವಾಕ್ಓವರ್ ಪಡೆದರು. 12ನೇ ಶ್ರೇಯಾಂಕದ ಸಿದ್ಧಾಂತ್ ಸಲಾರ್ 21–15, 21–12ರಿಂದ ವರ್ಷಿತ್ ರೆಡ್ಡಿ ಬೊಕ್ಕ ಎದುರು; 13ನೇ ಶ್ರೇಯಾಂಕದ ಶಿಖರ್ ರಲ್ಲನ್ 21–16, 21–18ರಿಂದ ನಾಗೇಶ್ ಚಾಮ್ಲೆ ಎದುರು; 14ನೇ ಶ್ರೇಯಾಂಕದ ಅಖಿಲ್ ರಾವ್ ಸೂರ್ಯನೇನಿ 21-13, 21-15 ದಿಶಾಂತ್ ಅಹ್ಲಾವತ್ ಎದುರು ಗೆಲುವು ಸಾಧಿಸಿದರು.
ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರವೀಣ ಸುಬ್ಬುರಾಜ್ 21–18, 13–21, 21–12ರಿಂದ ತನೀಶಾ ಸಿಂಗ್ ವಿರುದ್ಧ; ಆಯುಷಿ ಭಟ್ 21–4, 21–12ರಿಂದ ನಂದಿನಿ ಎಸ್. ವಿರುದ್ಧ ಜಯ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.