ADVERTISEMENT

ಬ್ಯಾಡ್ಮಿಂಟನ್‌: ಕೃಷ್ಣ ಪ್ರಸಾದ್‌–ಪ್ರಣವ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST

ಬಾರ್ಸಿಲೋನಾ: ಭಾರತದ ಪ್ರಣವ್‌ ಜೆರಿ ಚೋಪ್ರಾ ಮತ್ತು ಕೃಷ್ಣ ಪ್ರಸಾದ್‌ ಗರಗ ಅವರು ಬಾರ್ಸಿಲೋನಾ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ದಿನವೇ ನಿರಾಸೆ ಕಂಡಿದ್ದಾರೆ.

ಮಂಗಳವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಪ್ರಣವ್‌ ಮತ್ತು ಕೃಷ್ಣ ಪ್ರಸಾದ್‌ 21–19, 16–21, 7–21ರಲ್ಲಿ ಇಂಗ್ಲೆಂಡ್‌ನ ಬೆನ್‌ ಲೇನ್‌ ಮತ್ತು ಸೀನ್‌ ವೆಂಡಿ ವಿರುದ್ಧ ಪರಾಭವಗೊಂಡರು. ಈ ಹೋರಾಟ 58 ನಿಮಿಷಗಳಲ್ಲಿ ಕೊನೆಗೊಂಡಿತು.

ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಮೊದಲ ಗೇಮ್‌ನಲ್ಲಿ ಎದುರಾಳಿಗಳ ಸವಾಲು ಮೀರಿನಿಂತ ಪ್ರಣವ್‌ ಮತ್ತು ಕೃಷ್ಣ ಪ್ರಸಾದ್‌, ಎರಡನೇ ಗೇಮ್‌ನಲ್ಲಿ ದಿಟ್ಟ ಆಟ ಆಡಿದರು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಭಾರತದ ಜೋಡಿ ಸಂಪೂರ್ಣವಾಗಿ ಮಂಕಾಯಿತು.

ADVERTISEMENT

ಬುಧವಾರ ನಡೆಯುವ ಸಿಂಗಲ್ಸ್‌ ಪಂದ್ಯಗಳಲ್ಲಿ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಪರುಪಳ್ಳಿ ಕಶ್ಯಪ್‌, ಅಜಯ್‌ ಜಯರಾಮ್‌ ಮತ್ತು ಸಮೀರ್‌ ವರ್ಮಾ ಅವರು ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.