ಬೆಂಗಳೂರು: ಕೊರೊನಾ ವೈರಸ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ದೊರೆತ ಬಿಡುವಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಸಿಕ್ಕಿತು ಎಂದು ಭಾರತ ಮಹಿಳಾ ಹಾಕಿ ತಂಡದ ಗೋಲ್ಕೀಪರ್ ಸವಿತಾ ಹೇಳಿದ್ದಾರೆ.
ಇಲ್ಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಬುಧವಾರ ಆರಂಭವಾದ ಮಹಿಳಾ ತಂಡದ ತರಬೇತಿ ಶಿಬಿರದಲ್ಲಿ ಅವರು ಅಭ್ಯಾಸ ಮಾಡಿದರು.
’ನಾವು ವೃತ್ತಿಪರ ಅಥ್ಲೀಟ್ಗಳಾದಾಗ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಆಡಬೇಕಾಗುತ್ತದೆ. ಆದರೆ ಈ ಬಾರಿ ಅನಾಯಾಸವಾಗಿ ದೀರ್ಘ ಬಿಡುವು ಸಿಕ್ಕಿತು. ಈ ಅವಧಿಯಲ್ಲಿ ನಮ್ಮ ಜೀವನದ ಅವಲೋಕನ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ನನ್ನನ್ನು ನಾನು ಆರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ‘ ಎಂದು ಸವಿತಾ ಹೇಳಿದರು.
’ಈಗ ನಮ್ಮ ದೈಹಿಕ ಕ್ಷಮತೆಯನ್ನು ಮರಳಿ ಗಳಿಸಿಕೊಳ್ಳುವ ಮಹತ್ವದ ಸವಾಲು ಇದೆ. ಹೊರಾಂಗಣದಲ್ಲಿ ಓಟ, ಉನ್ನತ ದರ್ಜೆಯ ವ್ಯಾಯಾಮಗಳು ಮತ್ತಿತರ ಕಸರತ್ತುಗಳನ್ನು ಮಾಡಲಾಗುತ್ತಿದೆ‘ ಎಂದು ವಿವರಿಸಿದರು.
ತಮ್ಮ ತವರೂರಿನಿಂದ ಮರಳಿದ ನಂತರ ಆಟಗಾರ್ತಿಯರು 14 ದಿನಗಳ ಪ್ರತ್ಯೇಕವಾಸವನ್ನು ಮುಗಿಸಿದ್ದಾರೆ. ಕೋವಿಡ್ ಟೆಸ್ಟ್ಗಳಲ್ಲಿ ನೆಗೆಟಿಬ್ ಬಂದ ನಂತರ ಅಭ್ಯಾಸಕ್ಕಾಗಿ ಕಣಕ್ಕಿಳಿದಿದ್ದಾರೆ. ಸೆಪ್ಟೆಂಬರ್ 30ರವರೆಗೆ ಶಿಬಿರ ನಡೆಯಬಹುದೆನ್ನಲಾಗಿದೆ.
’ಇವತ್ತು (ಬುಧವಾರ) ಹೊರಾಂಗಣದಲ್ಲಿ ಅಭ್ಯಾಸ ಆರಂಭವಾಯಿತು. ಪರಸ್ಪರ ಅಂತರ ಕಾಯ್ದುಕೊಂಡು ತರಬೇತಿಯಲ್ಲಿ ಭಾಗವಹಿಸಿದ್ದೆವು. ಹಾಕಿ ಟರ್ಫ್ ಮೇಲೆ ನಮ್ಮ ಕಸರತ್ತುಗಳನ್ನು ಮಾಡುತ್ತಿದ್ದೇವೆ. ಇದರಿಂದ ಮರಳಿ ಲಯಕ್ಕೆ ಬರಲು ಸಾಧ್ಯವಾಗುತ್ತದೆ. ಮಾರ್ಗಸೂಚಿಯ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳನ್ನೂ ಪಾಲಿಸಲಾಗುತ್ತಿದೆ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.