ADVERTISEMENT

ಆಯಾ ವರ್ಷವೇ ಏಕಲವ್ಯ ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 15:24 IST
Last Updated 1 ಡಿಸೆಂಬರ್ 2025, 15:24 IST
   

ಬೆಂಗಳೂರು: ‘ಇನ್ನು ಮುಂದೆ ಆಯಾಯ ವರ್ಷವೇ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿ ಹೇಳಿದರು.

ಯವನಿಕಾದಲ್ಲಿ 2022 ಮತ್ತು 2023ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾ ರತ್ನ ಮತ್ತು ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಡವಾಗಿ ಪ್ರಶಸ್ತಿ ಕೊಟ್ಟರೆ ಹಳೆಯದಾಗುತ್ತದೆ. ಕೆಲವರು ನಿವೃತ್ತರಾದರೂ ಆಗಿರಬಹುದು’ ಎಂದಾಗ ಸಭೆಯಲ್ಲಿ ನಗೆಯ ಅಲೆಗಳೆದ್ದವು.

ADVERTISEMENT

‘ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ₹6 ಕೋಟಿ ನೀಡಲಾಗುವುದು. ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಸರ್ಕಾರಿ ಉದ್ಯೋಗವನ್ನೂ ನೀಡಲಾಗುವುದು, ಬೆಳ್ಳಿ ಗೆದ್ದವರಿಗೆ ₹4 ಕೋಟಿ ಮತ್ತು ಕಂಚು ಗೆದ್ದವರಿಗೆ ₹3 ಕೋಟಿ ನಗದು ಪುರಸ್ಕಾರ ನೀಡಲಾಗುವುದು’ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು, 2028ರ ಲಾಸ್‌ ಏಂಜಲೀಸ್ ಒಲಿಂಪಿಕ್ಸ್‌ಗಾಗಿ 60 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ತರಬೇತಿಯ ವೇಳೆ ಪ್ರತಿ ವರ್ಷ ಪ್ರತಿ ಕ್ರೀಡಾಪಟುವಿಗೆ ₹10 ಲಕ್ಷ ನೀಡಲಾಗುತ್ತದೆ ಎಂದರು.

‘ನಾನು ಬಾಲ್ಯದಲ್ಲಿ ಎಲ್ಲ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಹೈಸ್ಕೂಲ್‌ನಲ್ಲಿ ಜಗಳಗಂಟನಾಗಿದ್ದೆ. ಎಲ್ಲದರಲ್ಲೂ ಭಾಗವಹಿಸುತ್ತಿದ್ದ ಕಾರಣ ಯಾವುದರಲ್ಲೂ ಉತ್ತಮ ಕ್ರೀಡಾಪಟುವಾಗಲು ಸಾಧ್ಯವಾಗಲಿಲ್ಲ. ನೀವೆಲ್ಲ ಒಂದೇ ಕ್ರೀಡೆ ಆಯ್ಕೆ ಮಾಡಿ ಅದರಲ್ಲಿ ಸಾಧನೆಗೆ ಶ್ರಮಿಸಿ’ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ 2022 ಮತ್ತು 2023ನೇ ಸಾಲಿನ ಕ್ರೀಡಾ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ವಿಧಾನಪರಿಷತ್ ಸದಸ್ಯ ಹಾಗೂ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್,  ಶಾಸಕ ರಿಜ್ವಾನ್ ಅರ್ಷದ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್‌, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಅರುಣ್ ಮಾಚಯ್ಯ ಹಾಜರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

2022ನೇ ಸಾಲಿನ ಏಕಲವ್ಯ ಪುರಸ್ಕೃತರು: ಪ್ರಿಯಾ ಎಚ್‌. ಮೋಹನ್ (ಅಥ್ಲೆಟಿಕ್ಸ್), ಮಿಥುನ್ ಮಂಜುನಾಥ್ (ಬ್ಯಾಡ್ಮಿಂಟನ್‌), ಪ್ರತ್ಯನುಷ್‌ ತೋಮರ್‌, ಸಂಪತ್‌ ವಿ.ಪಾಸ್ಮೆಲ್ (ಸೈಕ್ಲಿಂಗ್), ಮೊಹಮ್ಮದ್ ರಾಹಿಲ್‌ (ಹಾಕಿ/ ಪರ ತಂದೆ ನಾಸಿರುದ್ದೀನ್ ಸ್ವೀಕರಿಸಿದರು), ಧನಲಕ್ಷ್ಮಿ (ಕಯಾಕಿಂಗ್ ಮತ್ತು ಕೆನೊಯಿಂಗ್), ಅದಿತಿ ಅಶೋಕ್‌ (ಗಾಲ್ಫ್‌), ಎಸ್‌.ಡಿ.ಪ್ರಜ್ವಲ್‌ ದೇವ್ (ಟೆನಿಸ್‌), ಯುಕ್ತಿ ರಾಜೇಂದ್ರ (ಶೂಟಿಂಗ್), ರಿಧಿಮಾ ವಿರೇಂದ್ರಕುಮಾರ್ (ಈಜು), ಮಣಿಕಂದನ್ ಕೆ (ಪ್ಯಾರಾ ಕ್ಲೈಬಿಂಗ್), ಎಲ್‌.ಎಂ.ಮನೋಜ್ (ವಾಲಿಬಾಲ್‌), ಪ್ರವಲಿಕಾ ವಿ.ಕುಷ್ಟಗಿ (ಟೇಕ್ವಾಂಡೊ), ನಿಂಗಪ್ಪ ಪಿ.ಗೇಣೆನ್ನವರ (ಕುಸ್ತಿ), ರಕ್ಷಿತಾ ಆರ್‌. (ಪ್ಯಾರಾ ಅಥ್ಲೆಟಿಕ್ಸ್‌)

2023ನೇ ಸಾಲಿನ ಏಕಲವ್ಯ ಪುರಸ್ಕೃತರು: ನಿಹಾಲ್ ಜೋಯೆಲ್ (ಅಥ್ಲೆಟಿಕ್ಸ್‌), ಕೆ.ಸಾಯಿ ಪ್ರತೀಕ್‌, ಆರ್‌.ಸಂಜನಾ (ಬ್ಯಾಸ್ಕೆಟ್‌ಬಾಲ್‌), ಅನುಪಮಾ ಗುಳೇದ (ಸೈಕ್ಲಿಂಗ್), ನೈದಿಲೆ ಬಿ (ಫೆನ್ಸಿಂಗ್), ಉಜ್ವಲ್‌ ನಾಯ್ಡು (ಜಿಮ್ನಾಸ್ಟಿಕ್ಸ್), ಬಿ.ಆಭರಣ ಸುದೇವ್ (ಹಾಕಿ), ದಾದಾಪೀರ್ (ಕಯಾಕಿಂಗ್/ ಕೆನೋಯಿಂಗ್), ದಿವ್ಯಾ  ಟಿ.ಎಸ್‌. (ಶೂಟಿಂಗ್‌), ಅನೀಶ್‌ ಎಸ್‌.ಗೌಡ (ಈಜು), ಪ್ರಿಯಾಂಕ ಎಸ್‌. (ವಾಲಿಬಾಲ್‌), ಐಶ್ವರ್ಯ ಪಿ.ಕರಿಗಾರ (ಕುಸ್ತಿ), ಉಷಾ ಬಿ.ಎನ್‌. (ವೇಟ್‌ ಲಿಫ್ಟಿಂಗ್‌), ಶ್ರೀಧರ ನಾಗಪ್ಪ ಮಾಳಗಿ (ಪ್ಯಾರಾ ಈಜು), ಅಮ್ಮು ಮೋಹನ್ (ಪ್ಯಾರಾ ಬ್ಯಾಡ್ಮಿಂಟನ್‌). (ಪ್ರಶಸ್ತಿಯು ₹4ಲಕ್ಷ ನಗದು, ಏಕಲವ್ಯ ಪ್ರತಿಮೆ, ಪ್ರಮಾಣಪತ್ರ ಒಳಗೊಂಡಿದೆ)

ತರಬೇತಿಗಾಗಿ ಜೀವಮಾನ ಸಾಧನೆ: (2022) ಬಿ.ಎನ್‌.ಸುಧಾಕರ್ (ಬ್ಯಾಡ್ಮಿಂಟನ್‌), ಆರ್.ರಾಜನ್‌ (ಬ್ಯಾಸ್ಕೆಟ್‌ಬಾಲ್‌), ಕೃಷ್ಣ (ಫುಟ್‌ಬಾಲ್‌), ಕಬಡ್ಡಿ (ಈಶ್ವರ ಅಂಗಡಿ), ಉಮೇಶ ಕಲಘಟಗಿ (ಈಜು). 2023: ರಾಹುಲ್ ಬಿ. (ಪ್ಯಾರಾ ಅಥ್ಲೆಟಿಕ್ಸ್‌), ಎಚ್‌.ಎನ್‌.ಕೃಷ್ಣಮೂರ್ತಿ (ಕಬಡ್ಡಿ), ಕೆ.ಸತ್ಯನಾರಾಯಣ (ಬ್ಯಾಸ್ಕೆಟ್‌ಬಾಲ್‌), ಎಚ್‌.ಬಿ.ರವೀಶ್ (ಹಾಕಿ). (₹3 ಲಕ್ಷ ನಗದು, ಪ್ರತಿಮೆ, ಪ್ರಶಂಸಾ ಪತ್ರ)

ಕರ್ನಾಟಕ ಕ್ರೀಡಾ ರತ್ನ: (2022); ದಿವ್ಯಾ ಎಂ.ಎಸ್‌. (ಬಾಲ್‌ ಬ್ಯಾಡ್ಮಿಂಟನ್‌), ಭಾಸ್ಕರ ದೇವಾಡಿಗ (ಕಂಬಳ),  ರಾಯಪ್ಪ ಧರೆಪ್ಪ ಅಬ್ಬುನವರ (ಸಂಗ್ರಾಣಿ ಕಲ್ಲು ಎತ್ತುವುದು), ಚೈತ್ರಾ ಬಿ. (ಕೊಕ್ಕೊ), ವಿಠಲ್‌ ಮೇಟಿ (ಕಬಡ್ಡಿ), ಶಂಕರಪ್ಪ ಕೆ. (ಮಲ್ಲಕಂಬ), ಗೋಪವ್ವ ಮಂಜುನಾಥ ಖೋಡ್ಕಿ (ಕುಸ್ತಿ), ಮೊಹಮ್ಮದ್ ಫಿರೋಜ್ ಶೇಖ್‌ (ಯೋಗ). 2023: ಗೌತಮ್‌ ಎಂ.ಕೆ. (ಕೊಕ್ಕೊ), ಸುನೀಲ್ ಬಿ.ಪಡತಾರೆ (ಕುಸ್ತಿ), ವಿನಾಯಕ ಎಂ.ಕೊಂಗಿ (ಯೋಗ), ಮೇಘನಾ ಎಚ್‌.ಎಂ. (ಬಾಲ್‌ಬ್ಯಾಡ್ಮಿಂಟನ್‌), ಆತ್ಮೀಯಾ ಎಂ.ಬಿ. (ಕಬಡ್ಡಿ), ಮಂಜುಳಾ ಹಣಮಂತ ಹುಲಗನ್ನವರ (ಮಲ್ಲಕಂಬ). (₹2 ಲಕ್ಷ ನಗದು, ಪ್ರತಿಮೆ ಮತ್ತು ಪ್ರಶಂಸಾಪತ್ರ)

2023: ಕ್ರೀಡಾ ಪೋಷಕ ಪ್ರಶಸ್ತಿ: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಬೆಂಗಳೂರು. (₹10 ಲಕ್ಷ ನಗದು, ಪ್ರಶಂಸಾಪತ್ರ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.