
ನವದೆಹಲಿ: ಇದೇ 20 ರಿಂದ 25ರವರೆಗೆ ಹೋಬಾರ್ಟ್ನಲ್ಲಿ ನಡೆಯಲಿರುವ ಎಫ್ಐಎಚ್ ಪ್ರೊ ಲೀಗ್ ಪಂದ್ಯಗಳನ್ನು ಆಡುವ ಭಾರತ ಹಾಕಿ ತಂಡಕ್ಕೆ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಅವರನ್ನು ಮಂಗಳವಾರ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ತವರಿನಲ್ಲಿ ನಡೆದ ರೂರ್ಕೆಲಾ ಲೆಗ್ನಲ್ಲಿ ತಂಡವು ಸತತ ಸೋಲುಗಳಿಂದ ಹೈರಾಣಾದ ಬೆನ್ನಲ್ಲೇ ಖಾಯಂ ನಾಯಕ ಹರ್ಮನ್ಪ್ರೀತ್ ಸಿಂಗ್ ಅವರು ‘ವೈಯಕ್ತಿಕ ಕಾರಣ’ ನೀಡಿ ಹಿಂದೆಸರಿದಿದ್ದಾರೆ.
ಹೋಬಾರ್ಟ್ನ ತಾಸ್ಮೇನಿಯಾ ಹಾಕಿ ಸೆಂಟರ್ನಲ್ಲಿ ಭಾರತ ತಂಡವು, ಸ್ಪೇನ್ ಮತ್ತು ಆತಿಥೇಯ ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಬೇಕಾಗಿದೆ.
ಭಾನುವಾರವಷ್ಟೇ ಮುಕ್ತಾಯಗೊಂಡ ಈ ಋತುವಿನ ತನ್ನ ಮೊದಲ ನಾಲ್ಕು ಪ್ರೊ ಲೀಗ್ ಪಂದ್ಯಗಳಲ್ಲಿ ಭಾರತ ನಿರಾಸೆ ಅನುಭವಿಸಿದೆ. ಅದರಲ್ಲೂ ಅರ್ಜೆಂಟೀನಾ ಎದುರು 0–8 ಸೋಲು ತಂಡವನ್ನು ಕಂಗಾಲುಗೊಳಿಸಿತ್ತು. ಪ್ರಬಲ ಬೆಲ್ಜಿಯಂ ವಿರುದ್ಧವೂ ಎರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು.
‘ರೂರ್ಕೆಲಾದಲ್ಲಿ ನಾಲ್ಕು ಪಂದ್ಯಗಳಲ್ಲಿ ಫಲಿತಾಂಶ ನಮ್ಮ ಕಡೆಯಿರಲಿಲ್ಲ. ಆದರೆ ನಾವು ಒಳ್ಳೆಯ ಪಾಠಗಳನ್ನು ಕಲಿತಿದ್ದೇವೆ. ಸುಧಾರಣೆಗಳನ್ನೂ ತಂದಿದ್ದೇವೆ’ ಎಂದು ಭಾರತ ತಂಡದ ಕೋಚ್ ಕ್ರೇಗ್ ಫುಲ್ಟನ್ ತಿಳಿಸಿದರು.
ಹೊಸ ನಾಯಕ ಹಾರ್ದಿಕ್ ಸಿಂಗ್, ಒಲಿಂಪಿಕ್ಸ್ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದ ತಂಡದಲ್ಲಿ ಆಡಿದ್ದಾರೆ.
‘ಹರ್ಮನ್ಪ್ರೀತ್ ಸಿಂಗ್ ಅವರು ವೈಯಕ್ತಿಕ ಕಾರಣಗಳಿಂದ ತಂಡದ ಭಾಗವಾಗಿಲ್ಲ’ ಎಂದು ಹಾಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಪತ್ನಿ ಅಮನದೀಪ್ ಕೌರ್ ಅವರು ಸದ್ಯವೇ ಎರಡನೇ ಮಗುವಿಗೆ ತಾಯಿಯಾಗುವ ನಿರೀಕ್ಷೆಯಲ್ಲಿರುವ ಕಾರಣ ಹರ್ಮನ್ಪ್ರೀತ್ ಅವರು ತಂಡದಿಂದ ಹೊರಗುಳಿದಿದ್ದಾರೆ ಎಂದು ಆಟಗಾರನ ಆಪ್ತಮೂಲವೊಂದು ತಿಳಿಸಿದೆ.
ಸೂರಜ್ ಕರ್ಕೇರಾ ಮತ್ತು ಮೋಹಿತ್ ಹೊನ್ನೇನಹಳ್ಳಿ ಶಶಿಕುಮಾರ್ ಅವರು ಗೋಲ್ಕೀಪಿಂಗ್ ಹೊಣೆ ಹಂಚಿಕೊಳ್ಳಲಿದ್ದಾರೆ. ರೂರ್ಕೆಲಾ ಲೆಗ್ನಲ್ಲಿ ಆಡಿದ್ದ ಪವನ್ ಅವರು, ಮೋಹಿತ್ಗೆ ಸ್ಥಾನ ಬಿಟ್ಟುಕೊಡಲಿದ್ದಾರೆ.
ತಂಡ ಹೀಗಿದೆ:
ಗೋಲ್ಕೀಪರ್ಸ್: ಸೂರಜ್ ಕರ್ಕೇರಾ, ಮೋಹಿತ್ ಶಶಿಕುಮಾರ್, ಡಿಫೆಂಡರ್ಸ್: ಅಮಿತ್ ರೋಹಿದಾಸ್, ಜರ್ಮನ್ಪ್ರೀತ್ ಸಿಂಗ್, ಜುಗರಾಜ್ ಸಿಂಗ್, ಸಂಜಯ್ ಸುಮಿತ್, ಅಮನದೀಪ್ ಲಾಕ್ರಾ, ಯಶದೀಪ್ ಸಿವಾಚ್, ಪೂವಣ್ಣ ಚಂದುರ ಬಾಬಿ. ಮಿಡ್ಫೀಲ್ಡರ್ಸ್: ರಾಜಿಂದರ್ ಸಿಂಗ್, ಮನಮೀತ್ ಸಿಂಗ್, ವಿವೇಕ ಸಾಗರ ಪ್ರಸಾದ್, ಹಾರ್ದಿಕ್ ಸಿಂಗ್, ಮೊಯ್ರಿಂಗ್ಥೆಮ್ ರವಿಚಂದ್ರ ಸಿಂಗ್, ವಿಷ್ಣುಕಾಂತ ಸಿಂಗ್, ರಾಜಕುಮಾರ್ ಪಾಲ್.
ಫಾರ್ವರ್ಡ್ಸ: ಅಭಿಷೇಕ್, ಶಿಲಾನಂದ ಲಾಕ್ರಾ, ಮನದೀಪ್ ಸಿಂಗ್, ಅರಿಜಿತ್ ಸಿಂಗ್ ಹುಂಡಲ್, ಆದಿತ್ಯ ಅರುಣ್ ಲಾಲಗೆ, ಅಂಗದವೀರ್ ಸಿಂಗ್, ಮಣಿಂದರ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.