ADVERTISEMENT

ಜಗರೂಪ್ ಮನವಿಗೆ ಸ್ಪಂದಿಸಿ: ಕೇಂದ್ರಕ್ಕೆ ನ್ಯಾಯಾಲಯ ಆದೇಶ

ಪಿಟಿಐ
Published 12 ನವೆಂಬರ್ 2021, 10:55 IST
Last Updated 12 ನವೆಂಬರ್ 2021, 10:55 IST
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್   

ನವದೆಹಲಿ: ದ್ರೋಣಾಚಾರ್ಯ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡದೇ ಇರುವುದನ್ನು ಪ್ರಶ್ನಿಸಿರುವ ಕುಸ್ತಿ ಕೋಚ್ ಜಗರೂಪ್ ಸಿಂಗ್ ರಾಠಿ ಅವರ ಮನವಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.

ಜೀವಮಾನ ಸಾಧಕರಿಗೆ ನೀಡುವ ಪ್ರಶಸ್ತಿ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟದ್ದನ್ನು ಪ್ರಶ್ನಿಸಿ 79 ವರ್ಷ ವಯಸ್ಸಿನ ಜಗರೂಪ್ ಅವರು ಕೇಂದ್ರ ಕ್ರೀಡಾ ಇಲಾಖೆಗೆ ಸವಾಲು ಹಾಕಿದ್ದರು. ನ್ಯಾಯಾಲಯಕ್ಕೂ ಮೊರೆ ಹೋಗಿದ್ದರು.

ಇದಕ್ಕೆ ಸ್ಪಂದಿಸಿರುವ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಮೂರು ವಾರಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದಾರೆ. ನ್ಯಾಯಾಲಯ ಜನವರಿ 27ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.

ADVERTISEMENT

ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ನವೆಂಬರ್ ಎರಡರಂದು ಕ್ರೀಡಾ ಇಲಾಖೆ ಬಿಡುಗಡೆ ಮಾಡಿತ್ತು. ಇದರಲ್ಲಿ ಜಗರೂಪ್ ಅವರ ಹೆಸರು ಇರಲಿಲ್ಲ. ಅಯ್ಕೆ ಸಮಿತಿಯ ಕಣ್ಣಿಗೆ ಬಿದ್ದರೂ ಸರ್ಕಾರ ಪಟ್ಟಿಯಿಂದ ಹೆಸರು ಕೈಬಿಟ್ಟಿದೆ ಎಂದು ಜಗರೂಪ್ ದೂರಿದ್ದರು.

43 ವರ್ಷ ಕೋಚಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಠಿ 1984ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ತರಬೇತುದಾರರಾಗಿದ್ದರು. ಅವರ ಬಳಿ ತರಬೇತಿ ಪಡೆದಿರುವವರ ಪೈಕಿ 40ಕ್ಕೂ ಹೆಚ್ಚು ಮಂದಿ ಅಂತರರಾಷ್ಟ್ರೀಯ ಪದಕಗಳನ್ನು ಗಳಿಸಿದ್ದಾರೆ. ಸ್ವತಃ ಕುಸ್ತಿಪಟು ಆಗಿರುವ ಜಗರೂಪ್ 1974 ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅವರಿಗೆ ಅರ್ಜುನ ಪ್ರಶಸ್ತಿ ಒಲಿದಿದೆ. ಆದರೆ ಯಾವುದೇ ಕಾರಣ ನೀಡದೆ ಹೆಸರನ್ನು ಕೈಬಿಡಲಾಗಿದೆ ಎಂದು ಜಗರೂಪ್ ಪರ ವಕೀಲ ರಾಹುಲ್‌ ಮೆಹ್ರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.