ADVERTISEMENT

ಸುದಿರ್‌ಮನ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಥಾಯ್ಲೆಂಡ್‌ಗೆ ಮಣಿದ ಭಾರತ

ಸುದಿರ್‌ಮನ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿ

ಪಿಟಿಐ
Published 26 ಸೆಪ್ಟೆಂಬರ್ 2021, 14:21 IST
Last Updated 26 ಸೆಪ್ಟೆಂಬರ್ 2021, 14:21 IST
ಎಂ.ಆರ್. ಅರ್ಜುನ್ ಮತ್ತು ಧೃವ ಕಪಿಲ
ಎಂ.ಆರ್. ಅರ್ಜುನ್ ಮತ್ತು ಧೃವ ಕಪಿಲ   

ವಂಟಾ, ಫಿನ್ಲೆಂಡ್‌: ಸುದಿರ್‌ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ತಂಡ ಎಡವಿದೆ. ಇದರೊಂದಿಗೆ ನಾಕೌಟ್‌ ಹಂತಕ್ಕೆ ಪ್ರವೇಶಿಸುವ ತಂಡದ ಆಸೆ ಕ್ಷೀಣಗೊಂಡಿದೆ.

ಭಾನುವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಭಾರತ ತಂಡದವರು 1–4ರಿಂದ ಥಾಯ್ಲೆಂಡ್ ಎದುರು ಎಡವಿದರು. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್. ಅರ್ಜುನ್ ಮತ್ತು ಧೃವ ಕಪಿಲ ಮಾತ್ರ ಜಯ ಸಾಧಿಸಿದರೆ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌, ಮಹಿಳಾ ಡಬಲ್ಸ್‌ನಲ್ಲಿ ಆಡಲಿಳಿದ ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿ ರೆಡ್ಡಿ ಜೋಡಿ ನಿರಾಸೆ ಅನುಭವಿಸಿತು.

ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬಾನ್ಸೋದ್, ಮಿಶ್ರ ಡಬಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್‌–ತನಿಶಾ ಕ್ರಾಸ್ಟೊ ಕೂಡ ಕೈಚೆಲ್ಲಿದರು.

ADVERTISEMENT

ವಿಶ್ವದ ಮಾಜಿ ಅಗ್ರಕ್ರಮಾಂಕದ ಆಟಗಾರ ಶ್ರೀಕಾಂತ್ ಅವರು 9-21 19-21ರಿಂದ ಕುನ್ಲಾವತ್‌ ವಿಟಿದ್ಸನ್‌ ಎದುರು ಮಣಿದರೆ, ಅಶ್ವಿನಿ–ಸಿಕ್ಕಿ 21-23 8-21ರಿಂದ ಜೊಂಗ್‌ಕೊಲ್ಪನ್‌ ಕಿತಿತಾರ್ಕುಲ್ ಹಾಗೂ ರವಿಂದಾ ಪ್ರಜೊಂಗ್‌ಜಾಯ್ ವಿರುದ್ಧ ಸೋಲು ಅನುಭವಿಸಿದರು.

ಉತ್ತಮ ಸಾಮರ್ಥ್ಯ ತೋರಿದರೂ ಮಾಳವಿಕಾ 11-21 14-21ರಿಂದ ಪಾರ್ನ್‌ಪವಿ ಚೊಚುವಾಂಗ್‌ ಎದುರು ಎಡವಿದರು. ನಂತರದ ಪಂದ್ಯದಲ್ಲಿ ಅರ್ಜುನ್ –ಕಪಿಲ 21-18 21-17ರಿಂದ ಸುಪಕ್‌ ಜೊಮ್ಕೊಹ್‌ ಹಾಗೂ ಕಿಟಿನುಪೊಂಗ್‌ ಕೆಡ್ರೆನ್‌ ಎದುರು ಜಯ ಸಾಧಿಸಿದರು.

ಸಾಯಿ ಪ್ರಣೀತ್‌– ತನಿಶಾ ಜೋಡಿಯು 13-21 11-21ರಿಂದ ದೆಚ್‌ಪೊಚ್‌ ಪುವರನುಕ್ರೊ ಮತ್ತು ಸಪ್‌ಸೈರಿ ತೀರ್‌ತನಾಚಿ ಎದುರು ಎಡವಿದರು.

ಮುಂದಿನ ಪಂದ್ಯದಲ್ಲಿ ಭಾರತಕ್ಕೆ ಹಾಲಿ ಚಾಂಪಿಯನ್‌ ಚೀನಾ ಸವಾಲು ಎದುರಾಗಿದೆ. ಸೋಮವಾರ ಈ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.