ಬಾರ್ಸಿಲೋನಾ: ಭಾರತದ ಗ್ರ್ಯಾಂಡ್ಮಾಸ್ಟರ್ ಎಸ್.ಪಿ. ಸೇತುರಾಮನ್ ಅವರು ಶುಕ್ರವಾರ ಮುಕ್ತಾಯಗೊಂಡ ಬಾರ್ಸಿಲೋನಾ ಓಪನ್ ಚೆಸ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕಾರ್ತಿಕೇಯನ್ ಮುರಳಿ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.
2644 ಎಲೊ ರೇಟಿಂಗ್ ಹೊಂದಿರುವ ಸೇತುರಾಮನ್ ಒಂಬತ್ತು ಸುತ್ತುಗಳ ಸ್ಪರ್ಧೆಯಲ್ಲಿ ಒಟ್ಟು 7.5 ಪಾಯಿಂಟ್ ಕಲೆ ಹಾಕಿದರು. ರಷ್ಯಾದ ಡ್ಯಾನಿಯಲ್ ಯೂಫ ಎರಡನೇ ಸ್ಥಾನ ಗಳಿಸಿದರು.
ಗುರುವಾರ ನಡೆದ ಕೊನೆಯ ಸುತ್ತಿನಲ್ಲಿ ಸೇತುರಾಮನ್ ಅವರು ಹಕೊಬ್ಯಾನ್ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಖಚಿತಪಡಿಸಿಕೊಂಡರು. ಅಗ್ರ ಶ್ರೇಯಾಂಕದ ಸೇತುರಾಮನ್ ಟೂರ್ನಿಯಲ್ಲಿ ಅಜೇಯರಾಗಿ ಉಳಿದರು. ಆರು ಪಂದ್ಯಗಳಲ್ಲಿ ಅವರು ಜಯ ಗಳಿಸಿದರೆ ಮೂರರಲ್ಲಿ ಡ್ರಾ ಸಾಧಿಸಿದ್ದರು. ಕೊನೆಯ ಮೂರು ಸುತ್ತುಗಳಲ್ಲಿ ಅವರು ಭಾರತದ ಎನ್.ಆರ್.ವಿಶಾಖ್ ಒಳಗೊಂಡಂತೆ ಮೂವರ ವಿರುದ್ಧ ಅಮೋಘ ಗೆಲುವು ದಾಖಲಿಸಿದ್ದಾರೆ.
ಈ ಜಯದೊಂದಿಗೆ ಸೇತುರಾಮನ್ 8.5 ಎಲೊ ಪಾಯಿಂಟ್ಸ್ ಗಳಿಸಿದರೆ ಮುರಳಿ ಅವರಿಗೆ 6.4 ಪಾಯಿಂಟ್ಗಳು ಲಭಿಸಿದವು. ಅವರ ಒಟ್ಟಾರೆ ರೇಟಿಂಗ್ 2606ಕ್ಕೆ ಏರಿತು. ಅರವಿಂದ್ ಚಿದಂಬರಂ ಐದನೇ ಸ್ಥಾನ ಗಳಿಸಿದ್ದು ಅರ್ಜುನ್ ಕಲ್ಯಾಣ್ ಮತ್ತು ವೈಶಾಖ್ ಕ್ರಮವಾಗಿ ಒಂಬತ್ತು ಮತ್ತು ಹತ್ತನೇ ಸ್ಥಾನಕ್ಕೆ ಕುಸಿದರು. ಅಂತರರಾಷ್ಟ್ರೀಯ ಮಾಸ್ಟರ್ ಎನ್.ಆರ್.ವಿಘ್ನೇಶ್ ಮತ್ತು ವೈಶಾಲಿ ಕ್ರಮವಾಗಿ 15 ಮತ್ತು 16ನೇ ಸ್ಥಾನ ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.