ಬ್ಯಾಂಕಾಕ್: ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕ್ರಮವಾಗಿ ಥಾಮಸ್ ಕಪ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಗಳ ಕೊನೆಯ ಲೀಗ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದವು.
ಬುಧವಾರ ಇಲ್ಲಿ ನಡೆದ ಪುರುಷರ ವಿಭಾಗದ ಸಿ ಗುಂಪಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಭಾರತದ ಆಟಗಾರರು 1–4ರಿಂದ ಚೀನಾ ತೈಪೆ ವಿರುದ್ಧ ಮಣಿದರು. ಡಿ ಗುಂಪಿನ ಪಂದ್ಯದಲ್ಲಿ ಮಹಿಳಾ ತಂಡವು 0–5ರಿಂದ ಕೊರಿಯಾ ಎದುರು ಸೋತಿತು.
ಭಾರತದ ಎರಡೂ ತಂಡಗಳು ಈಗಾಗಲೇ ಕ್ವಾರ್ಟರ್ಫೈನಲ್ ತಲುಪಿರುವುದರಿಂದ ಈ ಫಲಿತಾಂಶವು ಯಾವುದೇ ಪರಿಣಾಮ ಬೀರುವುದಿಲ್ಲ.
ಎಂಟರಘಟ್ಟದಲ್ಲಿ ಭಾರತದ ಮಹಿಳೆಯರು ಥಾಯ್ಲೆಂಡ್ ಸವಾಲು ಎದುರಿಸಲಿದ್ದಾರೆ.
ಕೊರಿಯಾ ಎದುರಿನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಪಿ.ವಿ ಸಿಂಧು 15–21, 14–21ರಿಂದ ಆ್ಯನ್ ಸೆಯುಂಗ್ ಎದುರು ಮಣಿದರು. ಶೃತಿ ಮಿಶ್ರಾ– ಸಿಮ್ರನ್ ಸಿಂಘಿ ಜೋಡಿಯು ಡಬಲ್ಸ್ನಲ್ಲಿ13-21, 12-21ರಿಂದ ಲೀ ಸೋಹಿ, ಶಿನ್ ಸೆಂಗ್ಚಾನ್ ವಿರುದ್ಧ ಎಡವಿದರು. ಮತ್ತೆರಡು ಸಿಂಗಲ್ಸ್ ಪಂದ್ಯಗಳಲ್ಲಿ ಆಕರ್ಷಿ ಕಶ್ಯಪ್, ಅಸ್ಮಿತಾ ಚಲಿಹಾ, ಡಬಲ್ಸ್ನಲ್ಲಿ ತನಿಶಾ ಕ್ರಾಸ್ತೊ– ತ್ರೀಶಾ ಜೋಲಿ ನಿರಾಸೆ ಅನುಭವಿಸಿದರು.
ಥಾಮಸ್ ಕಪ್ ಪಂದ್ಯದ ಸಿಂಗಲ್ಸ್ನಲ್ಲಿ ಕಿದಂಬಿ ಶ್ರೀಕಾಂತ್ ಮಾತ್ರ21-19, 21-16ರಿಂದ ಜು ವೇ ವಾಂಗ್ ಎದುರು ಗೆಲುವು ಸಾಧಿಸಿದರು. ಲಕ್ಷ್ಯ ಸೇನ್, ಎಚ್. ಎಸ್. ಪ್ರಣಯ್, ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ, ಎಂ.ಆರ್. ಅರ್ಜುನ್– ಧ್ರುವ ಕಪಿಲ ಸೋಲು ಕಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.