ನವದೆಹಲಿ: ಭಾರತದಪ್ರಮುಖ ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಅವರು ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವವರಿಗೆ ನೀಡುತ್ತಿರುವ ನೆರವನ್ನು 130 ಮಂದಿಗೆ ವಿಸ್ತರಿಸಿದ್ದಾರೆ. ಸದ್ಯ ಅವರು ದಾನಿಗಳಿಂದ ₹ 13 ಲಕ್ಷ ಹಣ ಸಂಗ್ರಹಿಸಿದ್ದಾರೆ.
ಈ ಮೊದಲು ಅವರು ₹ 10 ಲಕ್ಷ ನೆರವು ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದರು. ಆದರೆ ಹೆಚ್ಚಿನ ಹಣ ಸಂಗ್ರಹವಾದ ಹಿನ್ನೆಲೆಯಲ್ಲಿ ಇನ್ನಷ್ಟು ಆಟಗಾರರಿಗೆ ನೆರವು ನೀಡಲಿದ್ದಾರೆ. ಬಿಕ್ಕಟ್ಟಿನಲ್ಲಿರುವ ಆಟಗಾರರು ಒಂದು ಬಾರಿಯ ಆರ್ಥಿಕ ನೆರವಾಗಿ ₹ 10,000 ಸ್ವೀಕರಿಸಲಿದ್ದಾರೆ. ಹಿರಿಯ ಆಟಗಾರ್ತಿ ನೇಹಾ ಅಗರವಾಲ್ ಕೂಡ ಶರತ್ ಹಾಗೂ ಸತ್ಯನ್ ಅವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
‘ನಾವು ಆರಂಭದಲ್ಲಿ 100 ಜನರಿಗೆ ನೆರವಾಗಲು ನಿರ್ಧರಿಸಿದ್ದೆವು. ಆದರೆ ನಮ್ಮ ಕಾರ್ಯಕ್ಕೆ ಹೆಚ್ಚಿನ ಸ್ಪಂದನೆ ವ್ಯಕ್ತವಾದ ಕಾರಣ ಇನ್ನೂ 30 ಆಟಗಾರರಿಗೆ ಧನಸಹಾಯ ನೀಡುತ್ತಿದ್ದೇವೆ. ಭಾನುವಾರದವರೆಗೆ ಹಣವನ್ನು ಸ್ವೀಕರಿಸುತ್ತೇವೆ. ಬಳಿಕ ಎಷ್ಟು ಆಟಗಾರರಿಗೆ ಹಂಚಬೇಕೆಂದು ತೀರ್ಮಾನಿಸುತ್ತೇವೆ’ ಎಂದು ಶರತ್ ಹೇಳಿದ್ದಾರೆ.
ಶರತ್ ಹಾಗೂ ಸತ್ಯನ್ ಆರಂಭದಲ್ಲಿ ಚೆನ್ನೈನ ಸ್ಥಳೀಯ ಎಂಟು ಕೋಚ್ಗಳಿಗೆ ಮಾತ್ರ ನೆರವು ನೀಡಲು ಬಯಸಿದ್ದರು. ಆದರೆ ನೇಹಾ ಅಗರವಾಲ್ ಹಾಗೂ ಅಲ್ಟಿಮೇಟ್ ಟೇಬಲ್ ಟೆನಿಸ್(ಯುಟಿಟಿ) ಲೀಗ್ನ ಬೆಂಬಲ ದೊರಕಿದ ಬಳಿಕ ಹೆಚ್ಚು ನಿಧಿ ಸಂಗ್ರಹವಾಗಿ ಹೆಚ್ಚು ಮಂದಿಗೆ ಹಂಚಲು ನೆರವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.