ನವದೆಹಲಿ: ಟೋಕಿಯೊದಲ್ಲಿ ಭಾರತ ಕ್ರೀಡಾಪಟುಗಳಿಗೆ ಒದಗಿಸಲಾಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ತೆರಳಬೇಕಾಗಿದ್ದ ಭಾರತ ಒಲಿಂಪಿಕ್ ಸಂಸ್ಥೆಯ ನಿಯೋಗದ ಪ್ರವಾಸವನ್ನು ಮುಂದೂಡಲಾಗಿದೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರನ್ನು ಒಳಗೊಂಡ ನಿಯೋಗ ಮಾರ್ಚ್ 25ರಿಂದ 29ರ ವರೆಗೆ ಟೋಕಿಯೊಗೆ ತೆರಳುವ ಕಾರ್ಯಕ್ರಮವಿತ್ತು.
ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ನರಿಂದರ್ ಬಾತ್ರಾ, ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅಜಯ್ ಸಿಂಗ್, ಕೇಂದ್ರ ಕ್ರೀಡಾ ಇಲಾಖೆಯ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ, ಭಾರತ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಸಂದೀಪ್ ಪ್ರಧಾನ್ ಮುಂತಾದವರ ಹೆಸರು ಪಟ್ಟಿಯಲ್ಲಿತ್ತು. ಸದ್ಯ ಪ್ರವಾಸ ಕೈಗೊಳ್ಳದೇ ಇರಲುಭಾನುವಾರ ನಿರ್ಧರಿಸಲಾಗಿದ್ದು ಹೊಸ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಹೇಳಲಾಗಿದೆ.
ಜುಲೈ 24ರಿಂದ ಆಗಸ್ಟ್ ಒಂಬತ್ತರ ವರೆಗೆ ಟೋಕಿಯೊ ಒಲಿಂಪಿಕ್ಸ್ ನಿಗದಿಯಾಗಿದೆ. ಭಾರತವು ಇದೇ ಮೊದಲ ಬಾರಿ ಒಲಿಂಪಿಕ್ಸ್ ನಡೆಯುವ ಜಾಗದಲ್ಲಿ ಆತಿಥಿ ಗೃಹ ಸ್ಥಾಪಿಸಲು ಮುಂದಾಗಿದೆ. 2,200 ಚದರ ಮೀಟರ್ ಸ್ಥಳದಲ್ಲಿ ಜೆಎಸ್ಡಬ್ಲ್ಯು ಈ ಸೌಲಭ್ಯವನ್ನು ಒದಗಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.