ADVERTISEMENT

ಕೊರೊನಾ ಕಾಲದಲ್ಲಿ ಥಾಮಸ್–ಊಬರ್ ಕಪ್ ಟೂರ್ನಿ ಬೇಕೆ: ಸೈನಾ ನೆಹ್ವಾಲ್ ಪ್ರಶ್ನೆ

ಪಿಟಿಐ
Published 13 ಸೆಪ್ಟೆಂಬರ್ 2020, 15:41 IST
Last Updated 13 ಸೆಪ್ಟೆಂಬರ್ 2020, 15:41 IST
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್   

ನವದೆಹಲಿ: ವಿಶ್ವದೆಲ್ಲೆಡೆ ಕೊರೊನಾ ವೈರಸ್‌ನ ಉಪಟಳ ಇನ್ನೂ ಮುಂದುವರಿದಿದೆ. ಈ ಸಂದರ್ಭದಲ್ಲಿ ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಿರುವುದು ಸೂಕ್ತವೇ ಎಂದು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪ್ರಶ್ನಿಸಿದ್ದಾರೆ.

‘ಮಹಾಮಾರಿಯ ಭಯದಿಂದ ಈಗಾಗಲೇ ಏಳು ದೇಶಗಳ ತಂಡಗಳು ಟೂರ್ನಿಯಿಂದ ಹಿಂದೆ ಸರಿದಿವೆ. ಇಂತಹ ಪರಿಸ್ಥಿತಿಯಲ್ಲಿ ಟೂರ್ನಿ ನಡೆಸುವುದು ಎಷ್ಟು ಸುರಕ್ಷಿತ?’ ಎಂದು ಒಲಿಂಪಿಯನ್ ಸೈನಾ ಟ್ವೀಟ್ ಮಾಡಿದ್ದಾರೆ.

ಡೆನ್ಮಾರ್ಕ್‌ನಲ್ಲಿ ಅಕ್ಟೋಬರ್ 3 ರಿಂದ 11ರವರೆಗೆ ಟೂರ್ನಿ ನಡೆಯಲಿದೆ. ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಹೋದ ಐದು ತಿಂಗಳುಗಳಿಂದ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳು ನಡೆದಿಲ್ಲ. ದೀರ್ಘ ಸಮಯದ ನಂತರ ನಡೆಸಲು ಉದ್ದೇಶಿಸಿರುವ ಮಹತ್ವದ ಟೂರ್ನಿ ಇದಾಗಿದೆ. ಆದರೆ, ಈಗಾಗಲೇ ದಕ್ಷಿಣ ಕೊರಿಯಾ, ಥಾಯ್ಲೆಂಡ್, ಇಂಡೋನೆಷ್ಯಾ, ಆಸ್ಟ್ರೇಲಿಯಾ, ತೈವಾನ್, ಸಿಂಗಪುರ ಮತ್ತು ಹಾಂಗ್‌ಕಾಂಗ್ ತಂಡಗಳು ಹಿಂದೆ ಸರಿದಿವೆ.

ADVERTISEMENT

ಡೆನ್ಮಾರ್ಕ್‌ಗೆ ತೆರಳುವ ಭಾರತ ತಂಡದ ಆಟಗಾರರಿಗೆ ಹೈದರಾಬಾದಿನಲ್ಲಿ ಈಚೆಗೆ ಆಯೋಜಿಸಿದ್ದ ಪೂರ್ವಸಿದ್ಧತಾ ಶಿಬಿರಕ್ಕಾಗಿ ಕ್ವಾರಂಟೈನ್ ಪಾಲಿಸಲು ಕೆಲವು ಆಟಗಾರರು ಒಪ್ಪಿರಲಿಲ್ಲ. ಅದರಿಂದಾಗಿ ಶಿಬಿರವನ್ನು ರದ್ದು ಮಾಡಲಾಗಿತ್ತು. ಅದರಲ್ಲಿ ಒಲಿಂಪಿಯನ್ ಪಿ.ವಿ. ಸಿಂಧು ‘ವೈಯಕ್ತಿಕ ಕಾರಣ’ಗಳಿಗಾಗಿ ಭಾಗವಹಿಸಿರಲಿಲ್ಲ.

ವಿಶ್ವ ಬ್ಯಾಡ್ಮಿಂಟನ್ ಕಂಚಿನ ಪದಕ ವಿಜೇತ ಬಿ. ಸಾಯಿಪ್ರಣೀತ್ ಅವರು ಮಂಡಿನೋವಿನಿಂದಾಗಿ ಡೆನ್ಮಾರ್ಕ್‌ಗೆ ತೆರಳುತ್ತಿಲ್ಲ.

ಈಚೆಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿತ್ತು. ಆಗ ಡೆನ್ಮಾರ್ಕ್‌ಗೆ ಬರುವ ಆಟಗಾರರು ಕೊರೊನಾ ಪರೀಕ್ಷೆಯಲ್ಲಿ ಸೋಂಕುರಹಿತರಾಗಿದ್ದಾರೆ ಎಂದು ಖಚಿತಪಟ್ಟರೆ ಕ್ವಾರಂಟೈನ್ ನಿಯಮ ಪಾಲಿಸಬೇಕಿಲ್ಲ ಎಂದು ತಿಳಿಸಿತ್ತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.