ADVERTISEMENT

ಏಷ್ಯಾ ಬ್ಯಾಡ್ಮಿಂಟನ್‌ನಲ್ಲಿ ಪೆನಾಲ್ಟಿ ಪಾಯಿಂಟ್‌ ‘ಅನ್ಯಾಯ’: ಸಿಂಧು ಕಣ್ಣೀರು

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಸೆಮಿಯಲ್ಲಿ ಸೋಲು

ಪಿಟಿಐ
Published 1 ಮೇ 2022, 12:36 IST
Last Updated 1 ಮೇ 2022, 12:36 IST
ಪಿ.ವಿ.ಸಿಂಧು– ಪಿಟಿಐ ಚಿತ್ರ
ಪಿ.ವಿ.ಸಿಂಧು– ಪಿಟಿಐ ಚಿತ್ರ   

ಮನಿಲಾ, ಪಿಲಿಪ್ಪೀನ್ಸ್: ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಅಂಪೈರ್‌ಗಳ ‘ಅನ್ಯಾಯ‘ದ ನಿರ್ಧಾರದಿಂದಾಗಿ ತಾನು ಸೋಲಬೇಕಾಯಿತು ಎಂದು ಭಾರತದ ಆಟಗಾರ್ತಿ ಪಿ.ವಿ.ಸಿಂಧು ಕಣ್ಣೀರು ಸುರಿಸಿದ್ದಾರೆ.

ಪಂದ್ಯದ ಮೊದಲ ಗೇಮ್‌ ಗೆದ್ದುಕೊಂಡಿದ್ದ ಸಿಂಧು ಅವರಿಗೆ ಎರಡನೇ ಗೇಮ್‌ನಲ್ಲಿ 14–11ರಿಂದ ಮುನ್ನಡೆಯಲ್ಲಿದ್ದರು. ಈ ವೇಳೆ ಸರ್ವ್ ಮಾಡಲುಸಿಂಧು ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಅಂಪೈರ್ ಪೆನಾಲ್ಟಿ ನೀಡಿದ್ದರು. ಇದರಿಂದ ಎದುರಾಳಿ ಜಪಾನ್‌ನ ಅಕಾನೆ ಯಮಗುಚಿ ಅವರಿಗೆ ಒಂದು ಹೆಚ್ಚುವರಿ ಪಾಯಿಂಟ್‌ ಲಭಿಸಿತ್ತು. ತರುವಾಯ ಪಂದ್ಯದಲ್ಲಿ ಭಾರತದ ಆಟಗಾರ್ತಿ21-13, 19-21, 16-21ರಿಂದ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

‘ಸರ್ವ್ ಮಾಡಲು ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಅಂಪೈರ್‌ ನನಗೆ ಹೇಳಿದರು. ಆ ಹಂತದಲ್ಲಿ ಸರ್ವ್‌ ಎದುರಿಸಲು ಅಕಾನೆ ಇನ್ನೂ ಸಿದ್ಧರಾಗಿರಲಿಲ್ಲ. ಆದರೆ ತಕ್ಷಣ ಅವರಿಗೆ ಪಾಯಿಂಟ್‌ ನೀಡಲಾಯಿತು. ಇದು ನಿಜವಾಗಿ ಅನ್ಯಾಯ. ನನ್ನ ಸೋಲಿಗೆ ಇದೂ ಒಂದು ಕಾರಣ‘ ಎಂದು ಸಿಂಧು ಶನಿವಾರ ಪಂದ್ಯದ ಬಳಿಕ ನುಡಿದರು.

‘ನಾನು 14–11ರಿಂದ ಮುನ್ನಡೆಯಲ್ಲಿದ್ದ ಸಂದರ್ಭದಲ್ಲಿ ಪೆನಾಲ್ಟಿ ನೀಡಲಾಯಿತು. ಆಗ ಸ್ಕೋರ್‌ 15–11 ಆಗಬೇಕಿತ್ತು. ಬದಲಾಗಿ 14–12 ಆಯಿತು.ಇದು ನನಗೆ ಅನ್ಯಾಯ ಎಂದೆನಿಸಿತು. ಬಳಿಕ ಅಕಾನೆ ಸತತ ಪಾಯಿಂಟ್ಸ್ ಗಳಿಸಿದರು. ಹಾಗಾಗದಿದ್ದರೆ ನಾನು ಪಂದ್ಯ ಜಯಿಸಿ ಫೈನಲ್‌ನಲ್ಲಿ ಆಡುತ್ತಿದ್ದೆ‘ ಎಂದು ಸಿಂಧು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.