ನವದೆಹಲಿ/ಇಂಫಾಲ (ಪಿಟಿಐ): ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಜಯಿಸಿದ ಮೀರಾಬಾಯಿ ಚಾನು ಸೋಮವಾರ ಭಾರತಕ್ಕೆ ಮರಳಿದರು.
ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಆದರೆ ಈ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಸಾಮಾಜಿಕ ಅಂತರ ನಿಯಮ ಮಾಯವಾಗಿತ್ತು.
ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತಿತರರು ಭಾರತ್ ಮಾತಾ ಕೀ ಜೈ, ಮೀರಾಬಾಯಿಗೆ ಜಯವಾಗಲಿ ಎಂದು ಕೂಗಿದರು. ಭಾರತ ಕ್ರೀಡಾ ಪ್ರಾಧಿಕಾರ ಅಧಿಕಾರಿಗಳು ಮೀರಾಬಾಯಿಯನ್ನು ಗೌರವಿಸಿ ಬರಮಾಡಿಕೊಂಡರು.
‘ಕಳೆದ ಐದು ವರ್ಷಗಳಿಂದ ಕುಟುಂಬದೊಂದಿಗೆ ಬಹಳ ಸಮಯ ಕಳೆಯಲು ಸಾಧ್ಯವಾಗಿಲ್ಲ. ಈಗ ಮನೆಗೆ ತೆರಳಲು ಕಾತರಳಾಗಿದ್ದೇನೆ‘ ಎಂದು ಮೀರಾ ಹೇಳಿದರು.
ವಿಶ್ವ ಚಾಂಪಿಯನ್ ಆಗಿರುವ ಮೀರಾ ಒಲಿಂಪಿಕ್ಸ್ಗೂ ಮುನ್ನ ತರಬೇತಿಗಾಗಿ ಅಮೆರಿಕದಲ್ಲಿಯೇ ಹೆಚ್ಚು ಸಮಯ ಇದ್ದರು.
ಒಂದು ಕೋಟಿ ಬಹುಮಾನ
ಮೀರಾಬಾಯಿ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಘೋಷಿಸಿದ್ದಾರೆ.
‘ಚಾನು ಅವರನ್ನು ಹೆಚ್ಚುವರಿ ಪೊಲೀಸ್ ಸೂಪರಿಟೆಂಡೆಂಟ್ ಆಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ವಿಶ್ವದರ್ಜೆಯ ವೇಟ್ಲಿಫ್ಟಿಂಗ್ ಆಕಾಡೆಮಿಯನ್ನೂ ಆರಂಭಿಸಲಾಗುವುದು‘ ಎಂದು ಸಿಂಗ್ ತಿಳಿಸಿದ್ದಾರೆ.
ಇದೇ ಒಲಿಂಪಿಕ್ನಲ್ಲಿ ಸ್ಪರ್ಧಿಸಿದ್ದ ಮಣಿಪುರದವರೇ ಆದ ಜುಡೋ ಪಟು ಎಲ್. ಸುಶೀಲಾದೇವಿ ಅವರಿಗೆ ಕಾನ್ಸ್ಟೇಬಲ್ ನಿಂದ ಸಬ್ ಇನ್ಸ್ಪೆಕ್ಟರ್ ಆಗಿ ಬಡ್ತಿ ನೀಡಲಾಗಿದೆ.
ಮಣಿಪುರದಿಂದ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿರುವ ಐವರು ಕ್ರೀಡಾಪಟುಗಳಿಗೆ ತಲಾ ₹ 25 ಲಕ್ಷ ನೀಡಲಾಗುವುದು ಎಂದೂ ಸಿಂಗ್ ಘೋಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.