ಹುಬ್ಬಳ್ಳಿ: ಸ್ಪೇನ್ನಲ್ಲಿ ನ. 28ರಿಂದ ಡಿ. 4ರ ವರೆಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಆಯೋಜಿಸಿರುವ ವಿಶ್ವ ಸೀನಿಯರ್ಸ್ (ಮಾಸ್ಟರ್ಸ್) ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ ಹುಬ್ಬಳ್ಳಿಯ ಮಂಜಿರಿ ಮೊಕ್ತಾಲಿ ಆಯ್ಕೆಯಾಗಿದ್ದಾರೆ.
ಸೆಪ್ಟೆಂಬರ್ನಲ್ಲಿ ಗೋವಾದಲ್ಲಿ ನಡೆದಿದ್ದ ಅಖಿಲ ಭಾರತ ಮಾಸ್ಟರ್ಸ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 50 ವರ್ಷದ ಮೇಲಿನವರ ವಿಭಾಗದ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ನಲ್ಲಿ ಮಂಜಿರಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದರು. ಮಿಶ್ರ ವಿಭಾಗದಲ್ಲಿ ಅಸ್ಸಾಂನ ಬಿಜೋಯಿ ಕುಮಾರ್ ಬರ್ಮನ್ ಜೊತೆಗೂಡಿ ಆಡಿದ್ದರು. ಈ ಜೋಡಿ ವಿಶ್ವ ಮಾಸ್ಟರ್ಸ್ ಚಾಂಪಿಯನ್ಷಿಪ್ನಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದೆ.
ಮಂಜಿರಿ 2011ರಿಂದ ಪ್ರತಿ ವರ್ಷವೂ ರಾಷ್ಟ್ರೀಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ವಿಶ್ವ ಚಾಂಪಿಯನ್ಷಿಪ್ಗೆ ಅವರು ಆಯ್ಕೆಯಾಗಿದ್ದು ಇದು ಮೂರನೇ ಬಾರಿ. 2013ರಲ್ಲಿ ಟರ್ಕಿಯ ಅಂಕಾರ ಮತ್ತು 2015ರಲ್ಲಿ ಸ್ವೀಡನ್ನಲ್ಲಿ ನಡೆದಿದ್ದ ವಿಶ್ವ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.
ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವರಾದ ಮಂಜಿರಿ ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. 2009ರಿಂದ ಇಲ್ಲಿಬ್ಯಾಡ್ಮಿಂಟನ್ ಅಕಾಡೆಮಿ ನಡೆಸುತ್ತಿದ್ದಾರೆ.
ತಮ್ಮ ಆಯ್ಕೆ ಬಗ್ಗೆ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡ ಅವರು ‘ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸ್ಪರ್ಧಾತ್ಮಕ ಟೂರ್ನಿಗಳು ನಡೆದಿರಲಿಲ್ಲ. ಲಾಕ್ಡೌನ್ ಕಾರಣದಿಂದ ಮನೆಯಲ್ಲಿದ್ದರೂ ನಿತ್ಯ ಫಿಟ್ನೆಸ್ಗೆ ಒತ್ತುಕೊಟ್ಟು ಅಭ್ಯಾಸ ಮಾಡುತ್ತಿದ್ದೆ. ಫಿಟ್ನೆಸ್ ಬಗ್ಗೆ ಬೆಂಗಳೂರಿನ ಡೆಕ್ಲಿನ್ ಲಿಯಿಟ್ಟೊ ಬಳಿ ತರಬೇತಿ ಪಡೆದಿದ್ದರಿಂದ ಈಗ ಮೂರನೇ ಬಾರಿ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.