ನವದೆಹಲಿ: ಡೆನ್ಮಾರ್ಕ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಗಾಗಿ ಆಯೋಜಿಸಲು ಉದ್ದೇಶಿಸಿದ್ದ ರಾಷ್ಟ್ರೀಯ ಶಿಬಿರವನ್ನು ಗುರುವಾರ ರದ್ದು ಮಾಡಲಾಗಿದೆ.
ಆಟಗಾರರು ಏಳು ದಿನ ಕ್ವಾರಂಟೈನ್ನಲ್ಲಿ ಇರುವುದನ್ನು ಕಡ್ಡಾಯ ಮಾಡಿರುವುದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಅಕ್ಟೋಬರ್ ಮೂರರಿಂದ 11ರ ವರೆಗೆ ನಡೆಯಲಿರುವ ಟೂರ್ನಿಗಾಗಿ ಸೆಪ್ಟೆಂಬರ್ ಏಳರಿಂದ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಶಿಬಿರವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು.
ಕೋವಿಡ್–19ರ ಆತಂಕದಿಂದಾಗಿ ಶಿಬಿರಕ್ಕೂ ಮೊದಲು ಏಳು ದಿನ ಎಲ್ಲ 26 ಆಟಗಾರರು ಕ್ವಾರಂಟೈನ್ನಲ್ಲಿ ಇರಬೇಕು ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಸೂಚಿಸಿತ್ತು. ಇದಕ್ಕೆ ಆಟಗಾರರು ಮತ್ತು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿತ್ತು.
’ಕ್ವಾರಂಟೈನಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸಾಯ್ ಸ್ಪಷ್ಟವಾಗಿ ಹೇಳಿದೆ. ಗುರುವಾರ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸಾಯ್ ನಿರ್ದೇಶನ ಪಾಲಿಸಲು ಸಾಧ್ಯವಿಲ್ಲ ಎಂದು ಆಟಗಾರರು ಹೇಳಿದ್ದರಿಂದ ಶಿಬಿರವನ್ನು ರದ್ದು ಮಾಡಲು ಗುರುವಾರ ತೀರ್ಮಾನಿಸಲಾಯಿತು‘ ಎಂದು ಆಯ್ಕೆ ಸಮಿತಿಯ ಸದಸ್ಯ ವಿಮಲ್ ಕುಮಾರ್ ತಿಳಿಸಿದರು.
’ಶಿಬಿರ ನಡೆಯದೇ ಇರುವ ಕಾರಣ ಆಟಗಾರರು ತಮ್ಮ ರಾಜ್ಯಗಳ ಕೇಂದ್ರಗಳಲ್ಲಿ ಅಭ್ಯಾಸ ಮಾಡಲಿದ್ದು ಪ್ರತಿದಿನದ ಮಾಹಿತಿಯನ್ನು ಹೈದರಾಬಾದ್ಗೆ ಕಳುಹಿಸಬೇಕು‘ ಎಂದು ಹೇಳಿದ ವಿಮಲ್ ಕುಮಾರ್ ಶಿಬಿರ ಆಯೋಜಿಸದೆ ತಂಡವನ್ನು ಆಯ್ಕೆ ಮಾಡುವುದು ಕಷ್ಟಸಾಧ್ಯ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.