ADVERTISEMENT

ಅಕ್ಟೋಬರ್‌ 28ರಿಂದ ರಾಷ್ಟ್ರೀಯ ಟೇಬಲ್‌ ಟೆನಿಸ್‌ ತರಬೇತಿ ಶಿಬಿರ

ಪಿಟಿಐ
Published 24 ಅಕ್ಟೋಬರ್ 2020, 13:10 IST
Last Updated 24 ಅಕ್ಟೋಬರ್ 2020, 13:10 IST
ಅರ್ಚನಾ ಕಾಮತ್‌
ಅರ್ಚನಾ ಕಾಮತ್‌   

ನವದೆಹಲಿ: ರಾಷ್ಟ್ರೀಯ ಟೇಬಲ್‌ ಟೆನಿಸ್‌ ತರಬೇತಿ ಶಿಬಿರವು ಹರಿಯಾಣದ ಸೋನೆಪತ್‌ನಲ್ಲಿ ಅಕ್ಟೋಬರ್‌ 28ರಿಂದ ಡಿಸೆಂಬರ್‌ 8ರವರೆಗೆ ನಡೆಯಲಿದೆ. ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಶನಿವಾರ ಈ ವಿಷಯ ತಿಳಿಸಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಶರತ್‌ ಕಮಲ್‌ ಸೇರಿದಂತೆ 11 ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಿಬಿರಕ್ಕಾಗಿ ಸಾಯ್‌ ₹ 18 ಲಕ್ಷ ಮಂಜೂರು ಮಾಡಿದೆ. ಕೋವಿಡ್‌–19 ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ ಕಾರಣದಿಂದ ಮಾರ್ಚ್‌ನಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

‘ಸೋನೆಪತ್‌ನ ದೆಹಲಿ ಪಬ್ಲಿಕ್‌ ಶಾಲಾ ಆವರಣದಲ್ಲಿ ಅಕ್ಟೋಬರ್‌ 28ರಿಂದ ಡಿಸೆಂಬರ್‌ 8ರವರೆಗೆಭಾರತ ಟೇಬಲ್ ಟೆನಿಸ್‌ ಫೆಡರೇಷನ್‌ (ಟಿಟಿಎಫ್‌ಐ) ಶಿಬಿರವನ್ನು ಆಯೋಜಿಸಲಿದೆ. 11 ಪಟುಗಳು (ಐವರು ಮಹಿಳಾ ಹಾಗೂ ಆರು ಪುರುಷ) ಹಾಗೂ ನೆರವು ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ‘ ಎಂದು ಸಾಯ್‌ ಹೇಳಿದೆ.

ADVERTISEMENT

ಶರತ್‌ ಅಲ್ಲದೆ ಮಾನುಷ್‌ ಶಾ, ಮಾನವ್‌ ಠಕ್ಕರ್‌, ಸುಧಾಂಶು ಗ್ರೋವರ್‌ ಹಾಗೂ ಜುಬಿನ್‌ ಕುಮಾರ್‌ ಶಿಬಿರದಲ್ಲಿ ಇರಲಿದ್ದು, ಮಹಿಳೆಯರ ಪೈಕಿ ಅನುಷಾ ಕುಟುಂಬಲೆ, ದಿಯಾ ಚಿತ್ತಾಲೆ, ಸುತೀರ್ಥಾ ಮುಖರ್ಜಿ, ಕರ್ನಾಟಕದ ಅರ್ಚನಾ ಕಾಮತ್‌, ತಕೀಮ್‌ ಸರ್ಕಾರ್‌ ಹಾಗೂ ಕೌಶಾನಿ ನಾಥ್‌ ತರಬೇತಿ ಪಡೆಯಲಿದ್ದಾರೆ.

‘ಸದ್ಯ ನಾನು ಬೆಂಗಳೂರಿನಲ್ಲಿ ಮನೆಯಲ್ಲೇ ಅಭ್ಯಾಸ ನಡೆಸುತ್ತಿದ್ದೆ. ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಕಾತರಳಾಗಿದ್ದೇನೆ. ಬಹಳ ದಿನಗಳ ಬಳಿಕ ಸಹ ಆಟಗಾರ್ತಿಯರನ್ನು ಭೇಟಿಯಾಗಲು ಕಾಯುತ್ತಿದ್ದೇನೆ‘ ಎಂದು ಅರ್ಚನಾ ಕಾಮತ್‌ ಹೇಳಿದ್ದಾರೆ.

ಶಿಬಿರದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಕೋವಿಡ್‌–19 ತಡೆ ಮಾರ್ಗಸೂಚಿಗಳನ್ನು (ಎಸ್‌ಒಪಿ) ಪಾಲಿಸಬೇಕೆಂದು ಸಾಯ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.