ನೀರಜ್ ಚೋಪ್ರಾ, ಅರ್ಷದ್ ನದೀಮ್
(ಪಿಟಿಐ ಸಂಗ್ರಹ ಚಿತ್ರ)
ಲಾಹೋರ್: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಒಲಿಂಪಿಕ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಹೇಳಿದ್ದಾರೆ.
ಕೆಲವು ಸಮಯಗಳ ಹಿಂದೆ ಚೊಚ್ಚಲ ಎನ್ಸಿ ಕ್ಲಾಸಿಕ್ನಲ್ಲಿ ಭಾಗವಹಿಸುವಂತೆ ಅರ್ಷದ್ಗೆ ನೀರಜ್ ಆಹ್ವಾನ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಆಹ್ವಾನವನ್ನು ಅರ್ಷದ್ ನಿರಾಕರಿಸಿದ್ದರು.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಬಳಿಕ ಅರ್ಷದ್ ಅವರಿಂದ ನೀರಜ್ ಅಂತರ ಕಾಯ್ದುಕೊಂಡಿದ್ದರು.
ದೋಹಾದಲ್ಲಿ ನಡೆದ ಡೈಮಂಡ್ ಲೀಗ್ಗೂ ಮುನ್ನ ಪ್ರತಿಕ್ರಿಯಿಸಿದ್ದ ನೀರಜ್, 'ನಾನು ಹಾಗೂ ಅರ್ಷದ್ ಆಪ್ತ ಸ್ನೇಹಿತರಾಗಿರಲಿಲ್ಲ' ಎಂದು ಹೇಳಿದ್ದರು.
'ಭಾರತದೊಂದಿಗೆ ಸಂಘರ್ಷ ಉಂಟಾಗಿರುವ ಈ ಸ್ಥಿತಿಯಲ್ಲಿ ನೀರಜ್ ಕುರಿತು ನಾನು ಯಾವುದೇ ಹೇಳಿಕೆ ನೀಡಲು ಇಷ್ಟಪಡುವುದಿಲ್ಲ' ಎಂದು ಅರ್ಷದ್ ಹೇಳಿದ್ದಾರೆ.
'ನಾನು ಹಳ್ಳಿಯಿಂದ ಬೆಳೆದು ಬಂದವನು. ನಾನು ಮತ್ತು ನನ್ನ ಕುಟುಂಬ ಸದಾ ಸೇನೆಯೊಂದಿಗೆ ನಿಲ್ಲುತ್ತೇವೆ' ಎಂದು ಹೇಳಿದ್ದಾರೆ.
ಏತನ್ಮಧ್ಯೆ 100 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದು ನನ್ನ ಗುರಿಯಾಗಿದೆ ಎಂದು ಅರ್ಷದ್ ತಿಳಿಸಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನದೀಮ್ ಸ್ವರ್ಣ ಪದಕ ಗೆದ್ದಿದ್ದರು. ನೀರಜ್ ಚೋಪ್ರಾ ಬೆಳ್ಳಿ ಪದಕ ಜಯಿಸಿದ್ದರು.
ಪಾಕಿಸ್ತಾನದೊಂದಿಗೆ ಸಂಘರ್ಷದ ಹಿನ್ನೆಲೆಯಲ್ಲಿ ಎನ್ಸಿ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಮುಂದೂಡಲಾಗಿತ್ತು. ಈ ಕೂಟವು ಮೇ 24ರಂದು ಬೆಂಗಳೂರಿನಲ್ಲಿ ನಿಗದಿಯಾಗಿತ್ತು.
ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ 90.23 ಮೀಟರ್ ದೂರ ಜಾವೆಲಿನ್ ಎಸೆದು, ನೀರಜ್ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.