ನವದೆಹಲಿ: ದೀಪಾ ಕರ್ಮಾಕರ್ ಸೇರಿದಂತೆ ಹಿರಿಯ ಜಿಮ್ನಾಸ್ಟ್ಗಳಿಗೆ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಹಸಿರು ನಿಶಾನೆ ತೊರದ ಕಾರಣ ಮುಂಬರುವ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಹಾದಿಗೆ ಅಡ್ಡಿಯುಂಟಾಗಿದೆ.
ಮಾರ್ಚ್ 14ರಿಂದ 17ರ ವರೆಗೆ ಅಜರ್ಬೈಜಾನ್ನ ಬಾಕುವಿನಲ್ಲಿ ಮತ್ತು 20ರಿಂದ 23ರ ವರೆಗೆ ಕತಾರ್ನ ದೋಹಾದಲ್ಲಿ ವಿಶ್ವಕಪ್ ಸ್ಪರ್ಧೆಗಳು ನಡೆಯಲಿವೆ. ಈ ಎರಡೂ ವಿಶ್ವಕಪ್ಗಳು 2020ರ ಒಲಿಂಪಿಕ್ಸ್ನ ಭಾಗವಾಗಿ ನಡೆಯಲಿವೆ.
ಭಾರತ ಜಿಮ್ನಾಸ್ಟಿಕ್ ಫೆಡರೇಷನ್ ಇದಕ್ಕೆ ಜಿಮ್ನಾಸ್ಟ್ಗಳನ್ನು ಸಿದ್ಧಗೊಳಿಸುತ್ತಿದೆ. ಆದರೆ ಹಲವರಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಸಾಯ್ನಿಂದ ಅನುಮತಿ ಸಿಗಲಿಲ್ಲ.
ಪುರುಷರ ಆರ್ಟಿಸ್ಟಿಕ್ ವಿಭಾಗದಲ್ಲಿ ಯೋಗೇಶ್ವರ್ ಸಿಂಗ್ ಮತ್ತು ಆಶಿಶ್ ಕುಮಾರ್ ಸ್ಪರ್ಧಿಸುವುದು ಮಾತ್ರ ಖಚಿತವಾಗಿದೆ.
ಕಳೆದ ಬಾರಿ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದಿದ್ದ ವಿಶ್ವ ರಿದಮಿಕ್ ಜಿಮ್ನಾಸ್ಟಿಕ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ನಂತರ ನಡೆದಿದ್ದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ಗೆ ತೆರಳಲು ಕ್ರೀಡಾ ಸಚಿವಾಲಯ ಅನುಮತಿ ನೀಡಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.