ನವದೆಹಲಿ: ರ್ಯಾಂಕಿಂಗ್ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಶುಕ್ರವಾರ ಘೋಷಿಸಿದೆ. ಇದರೊಂದಿಗೆ, ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವ ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರ ಆಸೆ ಕಮರಿದೆ.
ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಅವಕಾಶವಿದ್ದ ಮೂರು ಟೂರ್ನಿಗಳನ್ನು ಕೊರೊನಾ ಕಾರಣದಿಂದ ಈಚೆಗೆ ರದ್ದುಗೊಳಿಸಲಾಗಿತ್ತು. ಹೀಗಾಗಿ ರ್ಯಾಂಕಿಂಗ್ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಎಂದು ನಿರೀಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ನಿರೀಕ್ಷೆಯಿಂದ ಕಾಯುತ್ತಿದ್ದರು.
‘ಟೋಕಿಯೊ ಒಲಿಂಪಿಕ್ಸ್ನ ಅರ್ಹತಾ ಅವಧಿ ಜೂನ್ 15ರಂದು ಮುಕ್ತಾಯಗೊಳ್ಳಲಿದೆ. ಆದರೆ ಅದಕ್ಕೂ ಮುನ್ನ ಯಾವುದೇ ಟೂರ್ನಿಯನ್ನು ಆಯೋಜಿಸಲಾಗುವುದಿಲ್ಲ. ರ್ಯಾಂಕಿಂಗ್ನಲ್ಲಿ ಬದಲಾವಣೆಯೂ ಇಲ್ಲ. ಆದ್ದರಿಂದ ಒಲಿಂಪಿಕ್ಸ್ಗೆ ಈಗಿನ ರ್ಯಾಂಕಿಂಗ್ ಪ್ರಕಾರವೇ ಆಟಗಾರರನ್ನು ಆಯ್ಕೆ ಮಾಡಬೇಕು’ ಎಂದು ಬಿಡಬ್ಲ್ಯುಎಫ್ ಹೇಳಿದೆ.
ಇಂಡಿಯಾ ಓಪನ್, ಮಲೇಷ್ಯಾ ಓಪನ್ ಮತ್ತು ಸಿಂಗಪುರ ಓಪನ್ ಟೂರ್ನಿಗಳನ್ನು ರದ್ದುಮಾಡಿದ್ದ ಬಿಡಬ್ಲ್ಯುಎಫ್ ಅರ್ಹತಾ ಅವಧಿಯನ್ನು ಮೂರು ತಿಂಗಳು ಮುಂದೂಡಿತ್ತು. ಮುಂದಿನ ತಿಂಗಳ 15ರ ವರೆಗೆ ಅರ್ಹತಾ ಅವಧಿ ಇದ್ದರೂ ತಾಂತ್ರಿಕವಾಗಿ ಒಲಿಂಪಿಕ್ಸ್ಗೆ ಟಿಕೆಟ್ ಗಳಿಸುವ ಅವಕಾಶ ಈಗಲೇ ಮುಗಿದಿದೆ ಎಂದು ಬಿಡಬ್ಲ್ಯುಎಫ್ ಪ್ರಧಾನ ಕಾರ್ಯದರ್ಶಿ ಥಾಮಸ್ ಲೂಂಡ್ ಹೇಳಿದ್ದಾರೆ.
ಭಾರತದ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್, ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರು ಈಗಾಗಲೇ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.