ಪಂಚಕುಲಾ (ಹರಿಯಾಣ): ಶ್ರೀಕಾಂತ್ ಜಾಧವ್ ಅವರ ಮಿಂಚಿನ ವೇಗದ ರೇಡಿಂಗ್ಗಳಿಂದ ಯುಪಿ ಯೋಧಾ ತಂಡವು ಹರಿಯಾಣ ಸ್ಟೀಲರ್ಸ್ ಎದುರು ಜಯಿಸಿತು.
ಥಾವು ದೇವಿಲಾಲ್ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಯುಪಿ ಯೋಧಾ 37–30ರಿಂದ ಹರಿಯಾಣ ಎದುರು ಜಯಿಸಿತು.
ಯೋಧಾ ತಂಡದ ಶ್ರೀಕಾಂತ್ ರೇಡಿಂಗ್ನಲ್ಲಿ ಏಳು ಪಾಯಿಂಟ್ ಮತ್ತು ನಾಲ್ಕು ಬೋನಸ್ ಅಂಕ ಗಳಿಸಿದರು. ಟ್ಯಾಕ್ಲಿಂಗ್ನಲ್ಲಿ ಬಿಗಿಪಟ್ಟು ಹಾಕಿದ ನಿತೀಶ್ ಕುಮಾರ್ ಮತ್ತು ಸುರೇಂದರ್ ಗಿಲ್ ತಲಾ ಏಳು ಪಾಯಿಂಟ್ ಸಂಗ್ರಹಿಸಿ ತಂಡಕ್ಕೆ ಜಯದ ಹಾದಿ ತೋರಿಸಿದರು.
ಹರಿಯಾಣ ತಂಡದ ವಿನಯ್ ರೇಡಿಂಗ್ನಲ್ಲಿ ಎಂಟು ಅಂಕ ಗಳಿಸಿದರು. ಟ್ಯಾಕ್ಲಿಂಗ್ನಲ್ಲಿ ಐದು ಅಂಕ ಗಳಿಸಿದ ರವಿಕುಮಾರ್ ಕೂಡ ಗಮನ ಸೆಳೆದರು. ಹರಿಯಾಣ ತಂಡವು ಇಲ್ಲಿಯವರೆಗೆ 18 ಪಂದ್ಯಗಳನ್ನು ಆಡಿದೆ. ಅದರಲ್ಲಿ 11ರಲ್ಲಿ ಜಯಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಯೋಧಾ ತಂಡವು ಹತ್ತು ಪಂದ್ಯಗಳಲ್ಲಿ ಜಯಿಸಿದೆ.
ತಮಿಳ್ ತಲೈವಾಸ್ಗೆ ನಿರಾಶೆ:ದಿನದ ಇನ್ನೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವು ಗುಜರಾತ್ ಫಾರ್ಚೂನ್ ಜೈಂಟ್ ಎದುರು ಹೀನಾಯ ಸೋಲು ಅನುಭವಿಸಿತು.
ಚುರುಕಾದ ರೇಡಿಂಗ್ ಮಾಡಿದ ಸೋನು (15 ಪಾಯಿಂಟ್ಸ್) ಅವರ ಆಟದಿಂದ ಗುಜರಾತ್ ತಂಡವು 50–21ರಿಂದ ತಮಿಳ್ ಎದುರು ಗೆದ್ದಿತು.
ಗುಜರಾತ್ ತಂಡವು ರೇಡಿಂಗ್ನಲ್ಲಿ 27 ಅಂಕಗಳನ್ನು ಸಂಗ್ರಹಿಸಿತು. ಅದೇ ತಮಿಳ್ ತಂಡವು 13 ಪಾಯಿಂಟ್ ಪಡೆಯಿತು.
ಇಂದಿನ ಪಂದ್ಯಗಳು
ಪುಣೇರಿ ಪಲ್ಟನ್–ದಬಂಗ್ ಡೆಲ್ಲಿ
ಹರಿಯಾಣ ಸ್ಟೀಲರ್ಸ್–ಫಾರ್ಚೂನ್ ಜೈಂಟ್ಸ್ (ರಾತ್ರಿ 8.30)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.