ಬ್ಯಾಡ್ಮಿಂಟನ್ ಅಂಗಳದಲ್ಲಿ ಈ ವರ್ಷ ಭಾರತಕ್ಕೆ ಸಿಹಿ ಮತ್ತು ಕಹಿಯ ಅನುಭವವಾಯಿತು.
ಪಿ.ವಿ.ಸಿಂಧು ಆಗಸ್ಟ್ನಲ್ಲಿ ಸ್ವಿಟ್ಜರ್ಲೆಂಡ್ನ ಬಾಸೆಲ್ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದು ಹೊಸ ಭಾಷ್ಯ ಬರೆದಿದ್ದರು. ಆಲ್ ಇಂಗ್ಲೆಂಡ್ ಓಪನ್ನಲ್ಲಿ ಮೊದಲ ಸುತ್ತಿನಲ್ಲೇ ಹೊರ ಬಿದ್ದಿದ್ದ ಸಿಂಧು ನಂತರ ಹಲವು ಟೂರ್ನಿಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟರು.
ಕೋಚ್ ಕಿಮ್ ಜು ಹ್ಯೂನ್ ಅವರು ಸಿಂಧು ಅವರನ್ನು ಹೃದಯ ಶೂನ್ಯಳೆಂದು ದೂರಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ವರ್ಷದ ಆರಂಭದಲ್ಲಿ ಮಲೇಷ್ಯಾ ಮಾಸ್ಟರ್ಸ್ ಮತ್ತು ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಕಿರೀಟ ಮುಡಿಗೇರಿಸಿಕೊಂಡು ಹಿಗ್ಗಿದ್ದ ಸೈನಾ ನೆಹ್ವಾಲ್ ಅವರಿಗೂ ನಂತರದ ಟೂರ್ನಿಗಳಲ್ಲಿ ಯಶಸ್ಸು ಗಗನಕುಸುಮವಾಯಿತು.
ಬಿ.ಸಾಯಿ ಪ್ರಣೀತ್ ಅವರು ವಿಶ್ವ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ನಲ್ಲಿ 36 ವರ್ಷಗಳ ನಂತರ ಭಾರತಕ್ಕೆ ಪದಕ ಗೆದ್ದುಕೊಟ್ಟರು. ಅವರು ಬಾಸೆಲ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಕಿದಂಬಿ ಶ್ರೀಕಾಂತ್, ಎಚ್.ಎಸ್.ಪ್ರಣಯ್ ಮತ್ತು ಪರುಪಳ್ಳಿ ಕಶ್ಯಪ್ ಪಾಲಿಗೆ ಈ ವರ್ಷ ನಿರಾಶಾದಾಯಕವಾಗಿತ್ತು.ಮಹಿಳಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ, ಈ ವರ್ಷ ಒಟ್ಟು 13 ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.
18 ವರ್ಷದ ಲಕ್ಷ್ಯ ಸೇನ್ ಪಾಲಿಗೆ ಈ ವರ್ಷ ಸ್ಮರಣೀಯವಾಗಿತ್ತು. ಒಟ್ಟು ಐದು ಪ್ರಶಸ್ತಿಗಳನ್ನು ಜಯಿಸಿದ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 32ನೇ ಸ್ಥಾನಕ್ಕೇರಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು.
ಸೌರಭ್ ವರ್ಮಾ ಅವರು ವಿಯೆಟ್ನಾಂ ಮತ್ತು ಹೈದರಾಬಾದ್ನಲ್ಲಿ ನಡೆದಿದ್ದ ಸೂಪರ್ 100 ಟೂರ್ನಿಗಳಲ್ಲಿ ಚಾಂಪಿಯನ್ ಆದರೆ, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಥಾಯ್ಲೆಂಡ್ ಓಪನ್ನಲ್ಲಿ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹಿರಿಮೆಗೆ ಪಾತ್ರರಾದರು. ಇವರು ಫ್ರೆಂಚ್ ಓಪನ್ನಲ್ಲೂ ಫೈನಲ್ ಪ್ರವೇಶಿಸಿದ್ದರು.
ನವೆಂಬರ್ನಲ್ಲಿ ನಡೆದಿದ್ದ ಪ್ರೊ ಬ್ಯಾಡ್ಮಿಂಟನ್ ಲೀಗ್ ಹರಾಜಿನಲ್ಲಿ ಸಿಂಧು ಮತ್ತು ಚೀನಾ ತೈಪೆಯ ತೈ ಜು ಯಿಂಗ್ ತಲಾ ₹77 ಲಕ್ಷ ಮೌಲ್ಯ ಪಡೆದರು.
ಜಪಾನ್ನ ಕೆಂಟೊ ಮೊಮೊಟಾ ಈ ಋತುವಿನಲ್ಲಿ ಒಟ್ಟು 11 ಪ್ರಶಸ್ತಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದರು.