ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ಖೇಲೊ ಇಂಡಿಯಾ ಟ್ಯಾಲೆಂಟ್ ಐಡೆಂಟಿಫಿಕೇಷನ್ ಡೆವಲಪ್ಮೆಂಟ್ ಯೋಜನೆಯ ಅಡಿಯಲ್ಲಿ 734 ಮಂದಿ ಅಥ್ಲೀಟ್ಗಳಿಗೆ ವಿದ್ಯಾರ್ಥಿ ವೇತನ ನೀಡಲಿದೆ.
ಈ ಯೋಜನೆಗೆ ಆಯ್ಕೆಯಾಗಿರುವ ಅಥ್ಲೀಟ್ಗಳಿಗೆ ವಾರ್ಷಿಕ ₹1.20 ಲಕ್ಷ ಹಣ ಸಿಗಲಿದೆ. ಜೊತೆಗೆ ಖೇಲೊ ಇಂಡಿಯಾದ ಮಾನ್ಯತೆ ಪಡೆದಿರುವ ಅಕಾಡೆಮಿಗಳಲ್ಲಿ ವಸತಿ ಸಹಿತ ವಿಶೇಷ ತರಬೇತಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಅಥ್ಲೀಟ್ಗಳು ವಿವಿಧ ಟೂರ್ನಿಗಳಲ್ಲಿ ಭಾಗವಹಿಸಲು ಬೇಕಾಗುವ ಹಣ ಮತ್ತು ವೈದ್ಯಕೀಯ ವೆಚ್ಚವನ್ನೂ ಭರಿಸಲಾಗುತ್ತದೆ.
ಪ್ರತಿಭಾನ್ವಿತರನ್ನು ಆಯ್ಕೆ ಮಾಡುವ ಸಲುವಾಗಿ ‘ಎ ಟ್ಯಾಲೆಂಟ್ ಐಡೆಂಟಿಫಿಕೇಷನ್ ಕಮಿಟಿಯನ್ನು (ಟಿಐಸಿ) ನೇಮಕ ಮಾಡಲಾಗಿದೆ. ಇದರಲ್ಲಿ ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅಥ್ಲೀಟ್ ಮತ್ತು ಕೋಚ್ಗಳು ಇದ್ದಾರೆ. ಈ ಸಮಿತಿ ಅರ್ಹರನ್ನು ಆಯ್ಕೆ ಮಾಡಿ ಆ ಪಟ್ಟಿಯನ್ನು ‘ದಿ ಹೈ ಪವರ್ಡ್ ಕಮಿಟಿ’ಗೆ ಕಳುಹಿಸಲಿದ್ದು ಈ ಸಮಿತಿ ಇದನ್ನು ಪರಿಶೀಲಿಸಿ ಅಂತಿಮ ಮುದ್ರೆ ಒತ್ತಲಿದೆ.
‘ದಿ ಹೈ ಪವರ್ಡ್ ಕಮಿಟಿ, ಕಾಲ ಕಾಲಕ್ಕೆ ಅಥ್ಲೀಟ್ಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ‘ಸ್ಟ್ರಾಂಗ್ ಪರ್ಫಾರ್ಮೆನ್ಸ್ ಮ್ಯಾನೆಜ್ಮೆಂಟ್’ ಪದ್ಧತಿಯನ್ನು ಜಾರಿಗೊಳಿಸುವ ಆಲೋಚನೆ ಹೊಂದಿದೆ. ಅಥ್ಲೀಟ್ಗಳ ಸಾಧನೆ ತೃಪ್ತಿದಾಯಕವಾಗಿರದಿದ್ದಲ್ಲಿ ಅಂತಹವರನ್ನು ಅಕಾಡೆಮಿಗಳಿಂದ ಹೊರ ಹಾಕಲು ಚಿಂತಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಎಳವೆಯಲ್ಲಿಯೇ ಮಕ್ಕಳ ಪ್ರತಿಭೆಗೆ ಸಾಣೆ ಹಿಡಿದು ಅವರನ್ನು ದೊಡ್ಡ ಶಕ್ತಿಯಾಗಿ ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ಕಾರಣದಿಂದಲೇ ಪರಿಣಾಮಕಾರಿ ಕ್ರೀಡಾ ಪದ್ಧತಿಯನ್ನು ಜಾರಿಗೊಳಿಸಲು ಮುಂದಾಗಿದ್ದೇವೆ. ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ಖೇಲೊ ಇಂಡಿಯಾ ಟ್ಯಾಲೆಂಟ್ ಐಡೆಂಟಿಫಿಕೇಷನ್ ಡೆವಲಪ್ಮೆಂಟ್ ಯೋಜನೆ ಸಹಕಾರಿ ಯಾಗಲಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.