ADVERTISEMENT

ಈಜು ತರಬೇತಿಗೆ ಅವಕಾಶ ಕೊಡಿ: ಎಸ್‌ಎಫ್‌ಐನಿಂದ ಕ್ರೀಡಾ ಸಚಿವಾಲಯಕ್ಕೆ ಮನವಿ

ಪಿಟಿಐ
Published 20 ಮೇ 2020, 19:30 IST
Last Updated 20 ಮೇ 2020, 19:30 IST
ವೀರ್‌ಧವಳ್‌ ಖಾಡೆ
ವೀರ್‌ಧವಳ್‌ ಖಾಡೆ   

ನವದೆಹಲಿ: ಕ್ರೀಡಾ ಸಂಕೀರ್ಣಗಳಲ್ಲಿರುವ ಈಜುಕೊಳಗಳಲ್ಲಿ ಎಲೀಟ್‌ ಈಜುಪಟುಗಳ ತರಬೇತಿಗೆ ಅವಕಾಶ ಮಾಡಿಕೊಡಲು ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆ ಕೊಡಿಸುವಂತೆ ಬುಧವಾರ ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ), ಕ್ರೀಡಾ ಸಚಿವಾಲಯವನ್ನು ಕೇಳಿಕೊಂಡಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಧಿಸಲಾಗಿರುವ ನಾಲ್ಕನೇ ಹಂತದ ಲಾಕ್‌ಡೌನ್‌ನ ಮಾರ್ಗಸೂಚಿಗಳಲ್ಲಿ ಗೃಹ ಸಚಿವಾಲಯವು, ಕ್ರೀಡಾ ಸಂಕಿರ್ಣ ಹಾಗೂ ಕ್ರೀಡಾಂಗಣಗಳನ್ನು ಅಥ್ಲೀಟುಗಳ ತರಬೇತಿಗೆ ಮುಕ್ತಗೊಳಿಸಿತ್ತು. ಆದರೆ ಈಜುಕೊಳ ಹಾಗೂ ಜಿಮ್‌ ಚಟುವಟಿಕೆಗಳನ್ನು ಈ ವ್ಯಾಪ್ತಿಯಿಂದ ಹೊರಗಿಟ್ಟಿತ್ತು. ಹೀಗಾಗಿ ಈಗ ಕ್ರೀಡಾ ಸಚಿವ ಕಿರಣ್‌ ರಿಜಿಜು, ಭಾರತ ಒಲಿಂಪಿಕ್ ಅಸೋಸಿಯೇಷನ್‌ (ಐಒಎ) ಹಾಗೂ ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್‌) ಪತ್ರ ಬರೆದಿದೆ.

‘ಕನಿಷ್ಠ ಎಲೀಟ್‌ ಈಜುಪಟುಗಳಿಗಾದರೂ ತರಬೇತಿಗೆ ಅವಕಾಶ ಮಾಡಿಕೊಡಲು ಗೃಹ ಸಚಿವಾಲಯದ ಒಪ್ಪಿಗೆ ಪಡೆಯುವಂತೆ ಕ್ರೀಡಾ ಸಚಿವರಿಗೆ, ಸಾಯ್‌ ಹಾಗೂ ಐಒಎಗಳಿಗೆ ಕೇಳಿಕೊಂಡಿದ್ದೇವೆ’ ಎಂದು ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಷಿ ಹೇಳಿದ್ದಾರೆ.

ADVERTISEMENT

‘ಈಜುಪಟುಗಳು ನೀರಿಗಿಳಿಯದೆ ಎರಡು ತಿಂಗಳುಗಳು ಕಳೆದವು’ ಎಂದೂ ಅವರು ನುಡಿದರು.

‘ಎಲೀಟ್‌ ಪಟುಗಳಿಗೆ ಈಜುಕೊಳಗಳನ್ನು ಮುಕ್ತವಾಗಿಸುವುದು ಹಾಗೂ ‘ಮನರಂಜನೆಗಾಗಿ ಈಜು’ (ರಿಕ್ರಿಯೇಷನ್‌ ಸ್ವಿಮ್ಮಿಂಗ್‌) ಎರಡೂ ಒಂದೇ ಅಲ್ಲ’ ಎಂಬುದು ಎಸ್‌ಎಫ್‌ಐನ ಅಂಬೋಣ.

ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ’ಬಿ’ ಕ್ವಾಲಿಫಿಕೇಷನ್‌ ಗಳಿಸಿರುವ ವೀರ್‌ಧವಳ್‌ ಖಾಡೆ, ಶ್ರೀ ಹರಿ ನಟರಾಜ್, ಕುಶಾಗ್ರ ರಾವತ್‌ ಹಾಗೂ ಅದ್ವೈತ್‌ ಪೇಜ್‌ ಅವರಂತಹ ಪಟುಗಳಿಗೆ ತರಬೇತಿಗೆ ಅವಕಾಶ ಕಲ್ಪಿಸಲು ಎಸ್‌ಎಫ್‌ಐ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.