ಮಂಗಳೂರು: ಕೊನೆಯ ದಿನ ಪುಟಿದೆದ್ದ ಅಗ್ರ ಶ್ರೇಯಾಂಕದ ಆಟಗಾರ, ತಮಿಳುನಾಡಿನ ಶ್ಯಾಮ್ ಆರ್ ಮಂಗಳವಾರ ಮುಕ್ತಾಯಗೊಂಡ ರಾಷ್ಟ್ರೀಯ ರೇಟೆಡ್ ಮುಕ್ತ (ಕ್ಲಾಸಿಕಲ್) ಚೆಸ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು.
ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನದಲ್ಲಿ ಆಯೋಜಿಸಿದ್ದ ಟೂರ್ನಿಯ ಮೊದಲೆರಡು ದಿನ ಅಗ್ರ ಸ್ಥಾನದಲ್ಲಿದ್ದ ಶ್ಯಾಮ್ ಮೂರನೇ ದಿನವಾದ ಸೋಮವಾರ ಹಿನ್ನಡೆ ಕಂಡಿದ್ದರು. ದಕ್ಷಿಣ ಕನ್ನಡದ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವ, ಲಕ್ಷಿತ್ ಬಿ.ಸಾಲಿಯಾನ್ ಮತ್ತು ರುದ್ರಾ ರಾಜೀವ ಅಗ್ರಸ್ಥಾನ ಹಂಚಿಕೊಂಡಿದ್ದರು. ಆದರೆ ಮಂಗಳವಾರ ಚೇತರಿಸಿಕೊಂಡ ಶ್ಯಾಮ್ ₹ 50 ಸಾವಿರ ಬಹುಮಾನ ಮೊತ್ತ ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು.
ಎಂಟು ಸುತ್ತುಗಳ ಅಂತ್ಯಕ್ಕೆ ಶ್ಯಾಮ್, ಕರ್ನಾಟಕದ ನಿರಂಜನ್ ವಾರಿಯರ್ ಮತ್ತು ಮಹಾರಾಷ್ಟ್ರದ ದರ್ಶ್ ಶೆಟ್ಟಿ ತಲಾ 7 ಪಾಯಿಂಟ್ ಕಲೆ ಹಾಕಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಶ್ಯಾಮ್ ಚಾಂಪಿಯನ್ ಪಟ್ಟ ಅಲಂಕರಿಸಿದರು. ನಿರಂಜನ್ ವಾರಿಯರ್ ರನ್ನರ್ ಅಪ್ ಆದರೆ, ದರ್ಶ್ ಶೆಟ್ಟಿ ಮೂರನೇ ಸ್ಥಾನ ಗಳಿಸಿದರು. ಇವರಿಬ್ಬರಿಗೆ ಕ್ರಮವಾಗಿ ₹ 35 ಸಾವಿರ ಮತ್ತು ₹ 25 ಸಾವಿರ ಬಹುಮಾನ ಮೊತ್ತ ಮತ್ತು ಟ್ರೋಫಿ ವಿತರಿಸಲಾಯಿತು.
ಲಕ್ಷಿತ್ ಬಿ.ಸಾಲಿಯಾನ್, ಕರ್ನಾಟಕದ ರವಿಗೋಪಾಲ್ ಹೆಗ್ಡೆ ಹಾಗೂ ಡಿಫೆನ್ಸ್ ಅಕೌಂಟ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ನ ಪ್ರದೀಪ್ ತಿವಾರಿ ತಲಾ 6.5 ಪಾಯಿಂಟ್ ಗಳಿಸಿದರು. ಇವರಿಗೆ ಕ್ರಮವಾಗಿ 4, 5 ಮತ್ತು 6ನೇ ಸ್ಥಾನ ಲಭಿಸಿತು. ಆರುಷಿ ಸೆವೆರಿನ್ 6 ಪಾಯಿಂಟ್ಗಳೊಂದಿಗೆ 8ನೇ ಸ್ಥಾನ ಗಳಿಸಿದರೆ ರುದ್ರಾ ರಾಜೀವ್ 5.5 ಪಾಯಿಂಟ್ಗಳೊಂದಿಗೆ 14ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ವಿವಿಧ ವಿಭಾಗಗಳಲ್ಲಿ ಒಟ್ಟು ₹ 6 ಲಕ್ಷ ಮೊತ್ತದ ಬಹುಮಾನ ವಿತರಿಸಲಾಯಿತು.
ರೋಚಕ ಕೊನೆಯ ಎರಡು ಸುತ್ತು
ಮಂಗಳವಾರ ನಡೆದ ಏಳು ಮತ್ತು ಎಂಟನೇ ಸುತ್ತುಗಳು ರೋಚಕ ಹೋರಾಟಗಳಿಗೆ ಸಾಕ್ಷಿಯಾದವು. ರುದ್ರ ರಾಜೀವ್ ವಿರುದ್ಧ ಶ್ಯಾಮ್ ಜಯ ಗಳಿಸಿ ಭರವಸೆ ಮೂಡಿಸಿದರು. ಕೊನೆಯ ಸುತ್ತಿನಲ್ಲಿ ಸ್ಥಳೀಯ ಆಟಗಾರ ರವೀಶ್ ಕೋಟೆ ಅವರನ್ನು ಮಣಿಸಿದ ಶ್ಯಾಮ್ 6 ಜಯ ಮತ್ತು 2 ಡ್ರಾದೊಂದಿಗೆ ಅಜೇಯರಾಗಿ ಉಳಿದು ಪ್ರಶಸ್ತಿಗೆ ಮುತ್ತಿಕ್ಕಿದರು.
ಹಿಮಾಂಶು ಮೌದ್ಗಿಲ್ ಎದುರು ಏಳನೇ ಸುತ್ತಿನಲ್ಲಿ ಜಯ ಗಳಿಸಿದ ನಿರಂಜನ್ ವಾರಿಯರ್ ಅಂತಿಮ ಸುತ್ತಿನಲ್ಲಿ ಅರುಷಿ ಹೆಲೆನ್ಗೆ ಸೋಲುಣಿಸಿ ಅಜೇಯ ಓಟದೊಂದಿಗೆ ದ್ವಿತೀಯ ಸ್ಥಾನ ಗಳಿಸಿದರು. ಏಳನೇ ಸುತ್ತಿನಲ್ಲಿ ಮುಖಾಮುಖಿಯಾದ ಆರುಷಿ ಹೆಲೆನ್ ಮತ್ತು ಲಕ್ಷಿತ್ ಸಾಲಿಯಾನ್ ಡ್ರಾ ಮಾಡಿಕೊಂಡರು. ಲಕ್ಷಿತ್ ಕೊನೆಯ ಸುತ್ತಿನಲ್ಲೂ ಡ್ರಾಗೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಅವರಿಗೆ ಭಾರಿ ಸವಾಲೊಡ್ಡಿದ ಕರ್ನಾಟಕದ ಅನೀಶ್ ಅಡಿಗ 12ನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.