ಮನಿಲಾ, ಪಿಲಿಪ್ಪೀನ್ಸ್: ಎದುರಾಳಿಯನ್ನು ನೇರ ಗೇಮ್ಗಳಿಂದ ಮಣಿಸಿದ ಭಾರತದ ಪಿ.ವಿ. ಸಿಂಧು ಏಷ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿಯೂ ಎಂಟರಘಟ್ಟಕ್ಕೆ ಮುನ್ನಡೆಯಿತು.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಹಾಗೂ ಕಿದಂಬಿ ಶ್ರೀಕಾಂತ್ ಅಭಿಯಾನ ಅಂತ್ಯವಾಯಿತು.
ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ, ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಮಹಿಳಾ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ 21-16, 21-16ರಿಂದ ಸಿಂಗಪುರದ ಜಾಸ್ಲಿನ್ ಹೂಯಿ ಅವರನ್ನು ಪರಾಭವಗೊಳಿಸಿದರು. ವಿಶ್ವ ಕ್ರಮಾಂಕದಲ್ಲಿ 100ನೇ ಸ್ಥಾನದಲ್ಲಿರುವ ಹೂಯಿ 42 ನಿಮಿಷಗಳಲ್ಲಿ ಸಿಂಧು ಎದುರು ಮಣಿದರು.
2014ರ ಗಿಮ್ಚಿಯೊನ್ ಆವೃತ್ತಿಯಲ್ಲಿ ಕಂಚು ಜಯಿಸಿರುವ ಸಿಂಧು, ಮುಂದಿನ ಪಂದ್ಯದಲ್ಲಿ ಚೀನಾದ ಹೆ ಬಿಂಗ್ ಜಿಯಾವೊ ಅವರನ್ನು ಎದುರಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಇದೇ ಆಟಗಾರ್ತಿಯನ್ನು ಮಣಿಸಿ ಸಿಂಧು ಕಂಚು ಕೊರಳಿಗೇರಿಸಿಕೊಂಡಿದ್ದರು.
ಪುರುಷರ ಡಬಲ್ಸ್ನ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಾತ್ವಿಕ್ –ಚಿರಾಗ್21-17, 21-15ರಿಂದ ಜಪಾನ್ ಅಕಿರಾ ಕೊಗಾ ಮತ್ತು ತೈಚಿ ಸೈಟೊ ವಿರುದ್ಧ ಮೇಲುಗೈ ಸಾಧಿಸಿದರು.
ಪ್ರತಿಷ್ಠಿತ ಟೂರ್ನಿಯಲ್ಲಿ ನಾಲ್ಕನೇ ಬಾರಿ ಪದಕ ಜಯಿಸುವ ಸೈನಾ ಅವರ ಆಸೆ ಈಡೇರಲಿಲ್ಲ. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅವರು 21–12, 7–21, 13–21ರಿಂದ 22 ವರ್ಷದ ಚೀನಾ ಆಟಗಾರ್ತಿ ವಾಂಗ್ ಜಿ ಯಿ ಎದುರು ಮಣಿದರು.
ಪುರುಷರ ಸಿಂಗಲ್ಸ್ನಲ್ಲಿ ಕಿದಂಬಿ ಶ್ರೀಕಾಂತ್ ಅವರಿಗೂ ನಿರಾಸೆ ಕಾದಿತ್ತು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು16-21, 21-17, 17-21ರಿಂದ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಶರಣಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.