ಉಡುಪಿ: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಅಖಿಲ ಭಾರತ ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ಗೆ ಚಾಲನೆ ದೊರೆಯಿತು.
ಶನಿವಾರದಿಂದ ಪಂದ್ಯಗಳು ಆರಂಭವಾಗಲಿದ್ದು, 8 ವಿಭಾಗಗಳಲ್ಲಿ 130 ಸ್ಪರ್ಧೆಗಳು ನಡೆಯಲಿವೆ. ಕ್ರೀಡಾಕೂಟಕ್ಕೆ 8 ರಾಜ್ಯಗಳಿಂದ 835 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ. ಕರ್ನಾಟಕದಿಂದ 170 ಸ್ಪರ್ಧಿಗಳು ಭಾಗವಹಿಸಿದ್ದಾರೆ.
ರಾಷ್ಟ್ರೀಯ ದಾಖಲೆ ಮಾಡಿರುವ ಕರ್ನಾಟಕದ ಪಾವನಾ ನಾಗರಾಜ್ (ಎತ್ತರ ಜಿಗಿತ), ಶೈಲಿ ಸಿಂಗ್ (ಉದ್ದ ಜಿಗಿತ), ಉನ್ನತಿ ಅಯ್ಯಪ್ಪ (ಉದ್ದ ಜಿಗಿತ), ಶಶಿಕಾಂತ್ (200 ಮೀ. ಓಟ) ರಿಹಾನ್ (400 ಮೀ), ಕೆ.ಪ್ರಜ್ಞಾ (ಹರ್ಡಲ್ಸ್) ಭಾಗವಹಿಸಿದ್ದಾರೆ. ಜತೆಗೆ, ಲೋಕೇಶ್ ರಾಥೋಡ್, ಭರತ್ ಶೆಟ್ಟಿ, ಕಾರ್ತಿಕ್ ಪ್ರಶಸ್ತಿ ಗೆಲ್ಲುವ ಭರವಸೆಯ ಆಟಗಾರರಾಗಿದ್ದಾರೆ.
ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯಿಂದ ಕ್ರೀಡಾಕೂಟಕ್ಕೆ 200 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ಯುಐಡಿ ನೋಂದಣಿ ಮಾಡಿಕೊಳ್ಳಲು ತಡವಾದ ಕಾರಣ 30 ಕ್ರೀಡಾಪಟುಗಳು ಭಾಗವಹಿಸುತ್ತಿಲ್ಲ. 170 ಮಂದಿ ಮಾತ್ರ ರಾಜ್ಯದ ಆಟಗಾರರು ಇದ್ದಾರೆ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ರಾಜವೇಲು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.