
ಮನಸುಖ್ ಮಾಂಡವೀಯ
ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್) ಪ್ರಸ್ತುತ 1000ಕ್ಕೂ ಅಧಿಕ ಹುದ್ದೆಗಳು ಖಾಲಿಬಿದ್ದಿವೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಒಪ್ಪಿಕೊಂಡಿದ್ದಾರೆ. ‘ಕ್ರೀಡಾ ಪ್ರಾಧಿಕಾರಕ್ಕೆ ಕೊಡುವ ನೆರವು ಏನೇನೂ ಸಾಲದು. ಇಲ್ಲಿ ಸಿಬ್ಬಂದಿಯ ಕೊರತೆಯೂ ತೀವ್ರವಾಗಿದೆ’ ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿತ್ತು.
ಕೇರಳದ ಅಟ್ಟಿಂಗಲ್ ಕ್ಷೇತ್ರದ ಸಂಸದ ಅಡೂರ್ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರಾಧಿಕಾರದಲ್ಲಿ 1,191 ಹುದ್ದೆಗಳು ಖಾಲಿಯಿವೆ. ಕೆಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ’ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ನೇತೃತ್ವದ ಸ್ಥಾಯಿ ಸಮಿತಿ ಆಗಸ್ಟ್ನಲ್ಲಿ ವರದಿ ಸಲ್ಲಿಸಿದ್ದು, ಇದರಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಶೇ 45ರಷ್ಟು ಈಗ ಖಾಲಿಯಿವೆ ಎಂದು ತಿಳಿಸಿತ್ತು.
‘ಈ ಕೊರತೆಯನ್ನು ಗುತ್ತಿಗೆ ಮೇಲೆ ನೇಮಕಗೊಂಡ ಸಿಬ್ಬಂದಿ ನಿಭಾಯಿಸುತ್ತಿದ್ದು, ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ’ ಎಂದು ವರದಿ ತಿಳಿಸಿತ್ತು. ಸಮಿತಿಯಲ್ಲಿ ಆಮ್ ಆದ್ಮಿ ಪಕ್ಷದ ಹರಭಜನ್ ಸಿಂಗ್, ಬಿಜೆಪಿಯ ಸಂಭಿತ್ ಪಾತ್ರಾ ಮತ್ತು ಬಾನ್ಸುರಿ ಸ್ವರಾಜ್ ಅವರೂ ಸೇರಿದ್ದರು.
ಈ ವರ್ಷದ ವಾರ್ಷಿಕ ಬಜೆಟ್ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರ್ಕಾರವು ₹3,794 ಕೋಟಿ ಹಂಚಿಕೆ ಮಾಡಿತ್ತು. ಇದರಲ್ಲಿ ಭಾರತ ಕ್ರೀಡಾ ಪ್ರಾಧಿಕಾರಕ್ಕೆ ₹830 ಕೋಟಿ ಮಾತ್ರ ಮೀಸಲಿಟ್ಟಿತ್ತು.
ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಕ್ರೀಡಾಪಟುಗಳು ನೀಡಿರುವ ದೂರುಗಳ ಸಮಗ್ರ ದತ್ತಾಂಶವನ್ನು ಸರ್ಕಾರ ಹೊಂದಿದೆಯೇ ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ದತ್ತಾಂಶ ಸಿದ್ಧಪಡಿಸಿಲ್ಲ’ ಎಂದರು. ಆದರೆ ಕ್ರೀಡಾಪಟುಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಂಡವೀಯ ಅವರು ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.