ಹಳಿಯಾಳ (ಉತ್ತರ ಕನ್ನಡ): ಇಲ್ಲಿನ ಕುಸ್ತಿ ಅಖಾಡ ಸೋಮವಾರ ಇದೇ ಮೊದಲ ಬಾರಿಗೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಎರಡು ದಿನದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ವೇದಿಕೆ ಒದಗಿಸಿತು. ಬಿರುಸಿನ ಸ್ಪರ್ಧೆಗಳ ನಡುವೆ ರಭಸದ ಮಳೆ ಕೊಂಚ ಅಡ್ಡಿ ಉಂಟು ಮಾಡಿತು. ಆದರೆ, ಕುಸ್ತಿಪಟುಗಳ ಉತ್ಸಾಹ ಕುಂದಲಿಲ್ಲ.
ಬೆಳಗಾವಿಯ ಉಮೇಶ ಶಿರಗುಪ್ಪಿ ಮತ್ತು ಬಾಗಲಕೋಟೆಯ ಮಲ್ಲು ಎಲ್.ಶೆಟ್ಟಿ ನಡುವೆ ನಡೆದ ಮೊದಲ ಪಂದ್ಯದಲ್ಲಿ ಉಮೇಶ ಅವರು ಮಲ್ಲು ಅವರನ್ನು 9.1 ಅಂಕದಿಂದ ಸೋಲಿಸಿ, ಎರಡನೇ ಸುತ್ತಿಗೆ ಪ್ರವೇಶಿಸಿದರು.
ಬಾಲಕಿಯರ ವಿಭಾಗದ ಆರಂಭಿಕ ಪಂದ್ಯವು ಶ್ವೇತಾ ಅಣ್ಣಿಗೇರಿ ಮತ್ತು ಶಿವಮೊಗ್ಗದ ಕಾವ್ಯ ನಡುವೆ ನಡೆಯಿತು. ಶ್ವೇತಾ ಅಣ್ಣಿಗೇರಿ ಚಿತ್ ಆಧಾರದ ಮೇಲೆ ಕಾವ್ಯ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಸಾಗಿದರು.
ಮಳೆ ಕಾರಣ ಮಧ್ಯಾಹ್ನ ಎರಡೂವರೆ ಗಂಟೆ ಪಂದ್ಯ ಸ್ಥಗಿತಗೊಳಿಸಲಾಗಿತ್ತು. ಅಖಾಡಕ್ಕೆ ಅಳವಡಿಸಲಾಗಿದ್ದ ಪೆಂಡಾಲ್ ತೊಯ್ದು, ನೀರು ಸೋರುತ್ತಿದ್ದ ಕಾರಣ ಕುಸ್ತಿಪಟುಗಳಿಗೆ ಅಡಚಣೆಯಾಯಿತು. ಸಂಜೆ ಪಂದ್ಯಗಳು ಪುನರಾರಂಭಗೊಂಡವು.
‘ರಾಜ್ಯದ 28 ಜಿಲ್ಲೆಗಳಿಂದ ಒಟ್ಟು 520 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಅಂತರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವ 40 ಮಂದಿ ರೆಫರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ತಂಡಕ್ಕೆ ಒಬ್ಬರು ಕೋಚ್ ತರಬೇತಿ ನೀಡಿದ್ದಾರೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸತೀಶ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.