ಬೆಂಗಳೂರು: ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಮಕ್ಕಳ ಮೇಲೆ ಪೋಷಕರು ಅತಿಯಾದ ಒತ್ತಡ ಹೇರಬಾರದು ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕಿನಾ ಹೇಳಿದರು.
ಇನ್ಫೊಸಿಸ್ ಫೌಂಡೇಷನ್– ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ‘ಸ್ಪೋರ್ಟ್ಸ್ ಕಾನ್ಕ್ಲೇವ್’ನಲ್ಲಿ ಅವರು ಮಾತನಾಡಿದರು. ‘ಕ್ರೀಡೆಯಲ್ಲಿ ಮುಂದು ವರಿಯುವಂತೆ ಹೆತ್ತವರು ನನ್ನ ಮೇಲೆ ಒತ್ತಡ ಹೇರಿರಲಿಲ್ಲ. ತಂಡವಾಗಿ ಆಡುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಬಯಕೆಯಾಗಿತ್ತು. ಆದ್ದರಿಂದ ಚಿಕ್ಕವನಿದ್ದಾಗ ಹಾಕಿ, ಫುಟ್ ಬಾಲ್ ಮತ್ತು ಕ್ರಿಕೆಟ್ ಆಡುತ್ತಿದ್ದೆ. ಆ ಬಳಿಕ ಕ್ರಿಕೆಟ್ನತ್ತ ಮಾತ್ರ ಗಮನ ಕೇಂದ್ರೀಕರಿಸಿದೆ’ ಎಂಬುದನ್ನು ದ್ರಾವಿಡ್ ನೆನಪಿಸಿಕೊಂಡರು.
‘ಹಿನ್ನಡೆ ಎದುರಾದಾಗ ಕುಗ್ಗದೆ ಪುಟಿದೆದ್ದು ನಿಲ್ಲುವ ಛಲವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು. ವೇಟ್ಲಿಫ್ಟರ್ ಮೀರಾಬಾಯಿ ಅವರು 2016ರ ಒಲಿಂಪಿಕ್ಸ್ನಲ್ಲಿ ಭಾರ ಎತ್ತಲು ಎಲ್ಲ ಪ್ರಯತ್ನಗಳಲ್ಲೂ ವಿಫಲರಾಗಿದ್ದರು. ಆ ಬಳಿಕ ಕಠಿಣ ಪರಿಶ್ರಮ ನಡೆಸಿದರಲ್ಲದೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದರು. ಅಂತಹ ಛಲ ಕ್ರೀಡಾಪಟುಗಳಲ್ಲಿ ಇರಬೇಕು’ ಎಂದು ರಸ್ಕಿನಾ ಹೇಳಿದರು.
ಕ್ರೀಡಾಪಟುಗಳು, ಪೋಷಕರು ಮತ್ತು ಕೋಚ್ಗಳು ಸೇರಿದಂತೆ 700ಕ್ಕೂ ಅಧಿಕ ಮಂದಿ ಪಾಲ್ಗೊಂಡರು.
ವಿವಿಧ ವಿಷಯಗಳಲ್ಲಿ ನಡೆದ ಸಂವಾದದಲ್ಲಿ ಮೆಂಟಲ್ ಕಂಡೀ ಷನಿಂಗ್ ಕೋಚ್ ಪ್ಯಾಡಿ ಅಪ್ಟನ್, ಇನ್ಫೋಸಿಸ್ ಫೌಂಡೇಷನ್ನ ಅಧ್ಯಕ್ಷೆ ಸುಧಾಮೂರ್ತಿ, ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್ ಭಾಗವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.