ADVERTISEMENT

ಟಿಟಿ: ದಿಗ್ಗಜ ಆಟಗಾರ್ತಿ ಉಷಾ ಸುಂದರ್‌ರಾಜ್‌ ನಿಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 22:04 IST
Last Updated 5 ಸೆಪ್ಟೆಂಬರ್ 2022, 22:04 IST
ಉಷಾ ಸುಂದರ್‌ರಾಜ್‌
ಉಷಾ ಸುಂದರ್‌ರಾಜ್‌   

ಬೆಂಗಳೂರು: ಕರ್ನಾಟಕದ ಟೇಬಲ್‌ ಟೆನಿಸ್‌ನ ದಿಗ್ಗಜ ಆಟಗಾರ್ತಿ ಎನಿಸಿಕೊಂಡಿದ್ದ ಉಷಾ ಸುಂದರ್‌ರಾಜ್‌ (80) ಸೋಮವಾರ ವಯೋಸಹಜ ಅನಾರೋಗ್ಯದ ಕಾರಣ ನಿಧನರಾದರು. ಅವಿವಾಹಿತರಾಗಿದ್ದ ಅವರು ಸಹೋದರಿಯರ ಜತೆ ವಾಸವಿದ್ದರು.

ಮಹಿಳಾ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆದ ಕರ್ನಾಟಕದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು. ಅವರು ಒಟ್ಟು ಐದು ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಕರ್ನಾಟಕದ ಬೇರೆ ಯಾರೂ ಈ ಸಾಧನೆ ಮಾಡಿಲ್ಲ.

1966 ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 1968 ರಲ್ಲಿ ಕೊನೆಯದಾಗಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು.

ADVERTISEMENT

ಉಷಾ ಸುಂದರ್‌ರಾಜ್‌ ಅವರು ಕೊನೆಯ ಬಾರಿ ರಾಷ್ಟ್ರೀಯ ಚಾಂಪಿಯನ್ ಆದ ಬಳಿಕ ಸುಮಾರು 50 ವರ್ಷಗಳ ಕಾಲ ಕರ್ನಾಟಕ ಪ್ರಶಸ್ತಿ ಬರ ಎದುರಿಸಿತ್ತು. 2019ರಲ್ಲಿ ಅರ್ಚನಾ ಕಾಮತ್ ಅವರು ಗೆದ್ದು ಬರ ನೀಗಿಸಿದ್ದರು.

ಉಷಾ, ಮಲ್ಲೇಶ್ವರಂ ಸಂಸ್ಥೆಯ ಅಂಗಣದಿಂದ ಕ್ರೀಡಾ ಪಯಣ ಆರಂಭಿಸಿದ್ದರು. ಆ ಸಂದರ್ಭದಲ್ಲಿ ಮಹಿಳಾ ಆಟಗಾರ್ತಿಯರು ಇಲ್ಲದ ಕಾರಣ ಹಲವು ವರ್ಷಗಳ ಅವಧಿಗೆ ಪುರುಷ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಅವರ ಆಟದಲ್ಲಿ ಹೆಚ್ಚು ರಕ್ಷಣಾತ್ಮಕ ಕೌಶಲಗಳ ಬಳಕೆಯಿತ್ತು.

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿ ನಲ್ಲಿ ಉದ್ಯೋಗದಲ್ಲಿದ್ದ ಅವರು ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಆಗಿ ನಿವೃತ್ತಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.