ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಾಲ್ಯದಲ್ಲಿಯೇ ಗುರುತಿಸಿ ಅವರ ಉನ್ನತ ವ್ಯಾಸಂಗದವರೆಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ 8ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ(ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ - ಎನ್ಟಿಎಸ್ಇ)ಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ನಡೆಸುತ್ತಿದೆ.
ರಾಜ್ಯಮಟ್ಟ/ಪ್ರಥಮ ಹಂತದ ಪರೀಕ್ಷೆಯು ಎಲ್ಲಾ ತ್ಲ್ಲಾಲೂಕು ಕೇಂದ್ರಗಳಲ್ಲಿ ಬರುವ ನವೆಂಬರ್20ರಂದು ನಡೆಯಲಿದೆ.
ರಾಜ್ಯಮಟ್ಟದಲ್ಲಿ ಆಯ್ಕೆಯಾದವರಿಗೆ ಮಾತ್ರ ರಾಷ್ಟ್ರಮಟ್ಟ/ದ್ವಿತೀಯ ಹಂತದ ಪರೀಕ್ಷೆಯು 2012ರ ಮೇ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ನಂತರ ಅದರಲ್ಲಿ ಅರ್ಹತೆ ಗಳಿಸುವವರಿಗೆ ಸಂದರ್ಶನ ನಡೆಸಲಾಗುತ್ತದೆ.
ಈ ಮೂರು ಹಂತಗಳಲ್ಲಿ ಆಯ್ಕೆಯಾದವರಿಗೆ 9ನೇ ತರಗತಿಯಿಂದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್.ಡಿ., ವಿದೇಶ ವ್ಯಾಸಂಗದವರೆಗೂ ಪ್ರತಿ ತಿಂಗಳು ರೂ 500 ವಿದ್ಯಾರ್ಥಿವೇತನ ದೊರೆಯಲಿದೆ. ಅಂದರೆ ವರ್ಷಕ್ಕೆ ರೂ. 6000. ಇಲ್ಲಿ ರಾಜ್ಯದ 222 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿದೆ.
ಈ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
* ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (ಜನರಲ್ ಮೆಂಟಲ್ ಎಬಿಲಿಟಿ ಟೆಸ್ಟ್ -ಜಿಮ್ಯಾಟ್)
* ವ್ಯಾಸಂಗ ಪ್ರವೃತ್ತಿ ಪರೀಕ್ಷೆ (ಸ್ಕಾಲ್ಯಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ - ಸ್ಯಾಟ್)
ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮಾಧ್ಯಮದಲ್ಲಷ್ಟೇ ಇರದೆ ಕನ್ನಡ, ತೆಲುಗು, ತಮಿಳು, ಮರಾಠಿ ಹಾಗೂ ಉರ್ದು - ಹೀಗೆ ಯಾವುದಾದರೂ ಒಂದು ಮಾಧ್ಯಮದಲ್ಲಿ ಬರೆಯಬಹುದು. ಇದನ್ನು ಅರ್ಜಿ ಹಾಕುವಾಗಲೇ ಆಯ್ಕೆಮಾಡಬಹುದು.
ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗದೇ ಉಳಿದ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು ಎರಡು ವರ್ಷಗಳು ಪ್ರತಿ ತಿಂಗಳು ರೂ 200 ಅನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತದೆ.
ಪಠ್ಯವಸ್ತು : 7ನೇ ತರಗತಿಯ ಪೂರ್ಣ ಹಾಗೂ 8ನೇ ತರಗತಿಯ ಪ್ರಥಮ ಸೆಮಿಸ್ಟರ್/ಅರ್ಧವಾರ್ಷಿಕ ಪರೀಕ್ಷೆಯವರೆಗಿನದು.
2011-12ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಯಾವುದೇ ವಿಧದ ಶಾಲೆ (ರಾಜ್ಯ ಪಠ್ಯಕ್ರಮ/ಸಿ.ಬಿ.ಎಸ್.ಇ./ಐ.ಸಿ.ಎಸ್.ಸಿ.)ಯ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿರುತ್ತಾರೆ.
ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಪರೀಕ್ಷೆ ಯೋಜನೆ ವಿವರ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗುಳಿಯದಂತೆ ತಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡಿದೆ.
ಇದು ಒಂದೇ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವುದು. ಈ ಪರೀಕ್ಷೆಯಲ್ಲಿ ಆಯ್ಕೆಯಾದ 5534 ವಿದ್ಯಾರ್ಥಿಗಳು, 9ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೂ ಪ್ರತಿ ತಿಂಗಳು ರೂ. 500 ವಿದ್ಯಾರ್ಥಿವೇತನ ಪಡೆಯಬಹುದು.
ಈ ಪರೀಕ್ಷೆಯ ಪ್ರಶ್ನೆಪತ್ರಿಕೆ, ಪಠ್ಯವಸ್ತು ಎಲ್ಲವೂ ಎನ್.ಟಿ.ಎಸ್.ಇ. ಪರೀಕ್ಷೆಯಂತೆಯೇ ಇದ್ದು ಪರೀಕ್ಷೆಯು ನವೆಂಬರ್ 20ರಂದು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ವಿಕಲ ಚೇತನ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ ಇದ್ದು 30 ನಿಮಿಷ ಹೆಚ್ಚಿನ ಅವಧಿ ನೀಡಲಾಗುವುದು ಜೊತೆಗೆ ಪರೀಕ್ಷಾ ಕೊಠಡಿ ನೆಲಮಹಡಿಯಲ್ಲಿರುವಂತೆ ಪ್ರತ್ಯೇಕ ಆಸನ ವ್ಯವಸ್ಥೆ ಇರುತ್ತದೆ.
ಪರೀಕ್ಷಾ ಶುಲ್ಕ ಇಲ್ಲ
ಸರ್ಕಾರಿ, ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಎನ್.ಎಂ.ಎಂ.ಎಸ್. ಪರೀಕ್ಷೆಗೆ ಅರ್ಹರು. ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ, ಉಚಿತ.ಅರ್ಜಿ ಹಾಕಲು ಕೊನೆು ದಿನ 12-09-2011
ಈ ಎರಡೂ ಪರೀಕ್ಷೆಗಳ ಅರ್ಜಿಗಳು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ದೊರೆಯುತ್ತವೆ. ಅಲ್ಲದೆ ಡಿ.ಎಸ್.ಇ. ಆರ್.ಟಿ.ಯ ವೆಬ್ಸೈಟ್ http://dsert.kar.nic.in ನಿಂದಲೂ ಡೌನ್ಲೋನ್ ಮಾಡಿ ಬಳಸಬಹುದು. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಸಹ ವೆಬ್ಸೈಟ್ನಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.