
ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ ತನುಷ್ ಶೇಖರ್ ಅವರು ಎಐಟಿಎ 12 ವರ್ಷದೊಳಗಿನವರ ರಾಷ್ಟ್ರೀಯ ಸರಣಿಯ ಟೆನಿಸ್ ಟೂರ್ನಿಯಲ್ಲಿ ಗುರುವಾರ ಸೆಮಿಫೈನಲ್ ಪ್ರವೇಶಿಸಿದರು.
ಕನ್ನಡಿಗ ತನುಷ್, ಬಾಲಕರ ವಿಭಾಗದ ಎಂಟರ ಘಟ್ಟದ ಪಂದ್ಯದಲ್ಲಿ 6–1, 6–4ರಿಂದ ಮಹಾರಾಷ್ಟ್ರದ ಆದ್ವಿಕ್ ಖನ್ನಾ ವಿರುದ್ಧ ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿದರು. ಎರಡನೇ ಶ್ರೇಯಾಂಕದ ಗುಜರಾತ್ನ ಆಟಗಾರ ರಿಯಾನ್ ನಂದಕುಮಾರ್ 7–5, 7–5ರಿಂದ ಉತ್ತರ ಪ್ರದೇಶದ ಆರಿವ್ ಗುಪ್ತಾ ಅವರನ್ನು ಮಣಿಸಿದರು.
ಬಾಲಕಿಯರ ವಿಭಾಗದಲ್ಲಿ, ಅಗ್ರ ಶ್ರೇಯಾಂಕದ ಕರ್ನಾಟಕದ ಆಟಗಾರ್ತಿ ಅನೀಷಾ ಮರಿಯಂ ಕಾರ್ನೆಲಿಯೊ ಅವರು 6–2, 6–3ರಿಂದ ತಮ್ಮದೇ ರಾಜ್ಯದ ನಿಷ್ಕಾ ಮಲ್ಲಿಕ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.
ಎರಡನೇ ಶ್ರೇಯಾಂಕದ ಅನೀಕ್ಷಾ ಜಿ. (ತೆಲಂಗಾಣ) ಅವರು 12ನೇ ಶ್ರೇಯಾಂಕದ ಆದ್ಯಾ ಸಿಂಗ್ ವಿರುದ್ಧ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೆ (6–0, 6–0) ನಿರಾಯಾಸ ಜಯ ದಾಖಲಿಸಿದರು. ಕರ್ನಾಟಕದ ಕಾಶ್ವಿ ವಿ. ಕೋಣಂಕಿ ಅವರೂ ನಾಲ್ಕರ ಘಟ್ಟ ಪ್ರವೇಶಿಸಿದರು.
ಕ್ವಾರ್ಟರ್ಫೈನಲ್ ಸುತ್ತಿನ ಫಲಿತಾಂಶಗಳು:
ಬಾಲಕರು: ತನುಷ್ ಶೇಖರ್ (ಕರ್ನಾಟಕ) 6-1, 6-4ರಿಂದ ಆದ್ವಿಕ್ ಖನ್ನಾ (ಮಹಾರಾಷ್ಟ್ರ) ವಿರುದ್ಧ; ಆದಿಶ್ ಪಿ.ಎಂ. (ತಮಿಳುನಾಡು) 6-1, 7-5ರಿಂದ ಆರುಧ್ ಖನ್ನಾ (ಮಹಾರಾಷ್ಟ್ರ) ವಿರುದ್ಧ; ಧನುಷ್ ಎಸ್.ಎಂ. (ಕರ್ನಾಟಕ) 6-3, 7-6(4)ರಿಂದ ಸ್ಯಾಂಟೊ ಬಾಬು ವಿರುದ್ಧ ಹಾಗೂ ರಿಯಾನ್ ನಂದಕುಮಾರ್ (ಗುಜರಾತ್) 7-5, 7-5ರಿಂದ ಆರಿವ್ ಗುಪ್ತಾ (ಉತ್ತರ ಪ್ರದೇಶ) ವಿರುದ್ಧ ಜಯ ಗಳಿಸಿದರು.
ಬಾಲಕಿಯರು: ಅನೀಷಾ ಮರಿಯಂ ಕಾರ್ನೆಲಿಯೊ (ಕರ್ನಾಟಕ) 6–2, 6–3ರಿಂದ ನಿಷ್ಕಾ ಮಲ್ಲಿಕ್ (ಕರ್ನಾಟಕ) ವಿರುದ್ಧ; ರೂಹಿ ಸಿಂಗ್ (ಕರ್ನಾಟಕ) 6-2, 6-3ರಿಂದ ತ್ಯಾಕ್ಷಿ ಲಾಥೆರ್ (ದೆಹಲಿ) ವಿರುದ್ಧ; ಕಾಶ್ವಿ ವಿ. ಕೋಣಂಕಿ 6-1, 6-3ರಿಂದ ಪ್ರಿಶಾ ವಿ. ಲಿಂಗಾ (ಮಹಾರಾಷ್ಟ್ರ) ವಿರುದ್ಧ ಹಾಗೂ ಅನೀಕ್ಷಾ ಜಿ. (ತೆಲಂಗಾಣ) 6–0, 6–0ಯಿಂದ ಆದ್ಯಾ ಸಿಂಗ್ (ಕರ್ನಾಟಕ) ವಿರುದ್ಧ ಗೆಲುವು ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.