ಬೀಲ್ (ಸ್ವಿಟ್ಜರ್ಲೆಂಡ್): ದಿಟ್ಟ ನಿರ್ಧಾರವೊಂದರಲ್ಲಿ ಭಾರತ ತಂಡವು ನೀಳಕಾಯದ ಯುವ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರನ್ನು ಡೇವಿಸ್ ಕಪ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಶುಕ್ರವಾರ ಪ್ರಬಲ
ಸ್ವಿಟ್ಜರ್ಲೆಂಡ್ ವಿರುದ್ಧ ಆರಂಭವಾಗುವ ವಿಶ್ವ ಗುಂಪು 1ರ ಪಂದ್ಯದಲ್ಲಿ ‘ಕಂಬ್ಯಾಕ್ ಮ್ಯಾನ್’ ಸುಮಿತ್ ನಗಾಲ್ ಸಹ ತಂಡಕ್ಕೆ ಮರಳಿದ್ದಾರೆ.
ಈ ಪಂದ್ಯಕ್ಕೆ ದಕ್ಷಿಣೇಶ್ವರ್ ಅವರನ್ನು ಕಳುಹಿಸುವಂತೆ ಅವರ ತರಬೇತುದಾರರಿಗೆ, ನಾಯಕ ರೋಹಿತ್ ರಾಜಪಾಲ್ ಮನವರಿಕೆ ಮಾಡಿಕೊಟ್ಟಿದ್ದರು. ಅಮೆರಿಕದಲ್ಲಿ ನೆಲೆಸಿರುವ ಮದುರೈ ಮೂಲದ, 6 ಅಡಿ 5 ಇಂಚು ಎತ್ತರದ ದಕ್ಷಿಣೇಶ್ವರ್ ಅವರು ಒಂದು ವಾರದ ಶಿಬಿರದಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ದಕ್ಷಿಣೇಶ್ವರ ಅವರ ಬಿರುಸಿನ ಹೊಡೆತ ಮತ್ತು ಭರ್ಜರಿ ಸರ್ವ್ಗಳ ಆಟ ಒಳಾಂಗಣ ಕೋರ್ಟ್ಗೆ ಹೊಂದಿಕೆಯಾಗುತ್ತದೆ. ಅವರು ಮೊದಲ ಸಿಂಗಲ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ವಿಶ್ವ ಕ್ರಮಾಂಕದಲ್ಲಿ 626ನೇ ಸ್ಥಾನದಲ್ಲಿರುವ ಅವರು, 155ನೇ ಸ್ಥಾನದಲ್ಲಿರುವ ಜೆರೋಮ್ ಕಿಮ್ ಅವರನ್ನು ಎದುರಿಸಲಿದ್ದಾರೆ.
‘ಆಟದ ಆಧಾರದ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತಿದ್ದೇವೆ. ಇದರಲ್ಲಿ ವಿಶೇಷವಾದುದೇನೂ ಇಲ್ಲ’ ಎಂದು ರಾಜಪಾಲ್ ಪಿಟಿಐಗೆ ತಿಳಿಸಿದರು.
2023ರಲ್ಲಿ ನಗಾಲ್ ಅವರು ಮೊರಾಕೊ ವಿರುದ್ಧ ಲಖನೌದಲ್ಲಿ ಕೊನೆಯ ಸಲ ಡೇವಿಸ್ ಕಪ್ ಆಡಿದ್ದರು. ಅವರು ಎರಡೂ ಸಿಂಗಲ್ಸ್ ಗೆದ್ದಿದ್ದರು. 2024 ಫೆಬ್ರುವರಿಯಲ್ಲಿ ಪಾಕಿಸ್ತಾನ ವಿರುದ್ಧ, ನಂತರ ಸ್ವೀಡನ್ ಮತ್ತು ಟೋಗೊ ವಿರುದ್ಧದ ಪಂದ್ಯಗಳಲ್ಲಿ ಅವರು ಆಡಿರಲಿಲ್ಲ.
292ನೇ ಕ್ರಮಾಂಕದ ನಗಾಲ್ ಸದ್ಯ ಉತ್ತಮ ಲಯದಲ್ಲಿಲ್ಲ. ಶುಕ್ರವಾರ ಎರಡನೇ ಸಿಂಗಲ್ಸ್ನಲ್ಲಿ ಅವರು ಮಾರ್ಕ್ ಆಂಡ್ರಿಯಾ ಹಸ್ಲರ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.