ಮೆಲ್ಬರ್ನ್ : ಭಾರತದ ಅಗ್ರ ಕ್ರಮಾಂಕದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮುಖ್ಯ ಡ್ರಾ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಶುಕ್ರವಾರ ನಡೆದ ಅಂತಿಮ ಸುತ್ತಿನ ಕ್ವಾಲಿಫೈಯರ್ ಪಂದ್ಯದಲ್ಲಿ ಅವರು ಲಾತ್ವಿಯಾದ ಅರ್ನೆಸ್ಟ್ಸ್ ಗುಲ್ಬಿಸ್ ಎದುರು ನೇರ ಸೆಟ್ಗಳಿಂದ ಸೋತರು.
ಕ್ವಾಲಿಫೈಯರ್ಸ್ನಲ್ಲಿ 17ನೇ ಶ್ರೇಯಾಂಕ ಪಡೆದಿದ್ದ ಭಾರತದ ಆಟಗಾರ, 6–7, 2–6ರಿಂದ ಗುಲ್ಬಿಸ್ ವಿರುದ್ಧ ಪರಾಭವಗೊಂಡರು.
ತೀವ್ರ ಜಿದ್ದಾಜಿದ್ದಿ ಕಂಡುಬಂದ ಮೊದಲ ಸೆಟ್ ಟೈಬ್ರೇಕ್ವರೆಗೂ ಸಾಗಿತ್ತು. ಆದರೆ ಆರಂಭದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಜ್ಞೇಶ್ ವಿಫಲರಾದರು. ಆದರೆ ಎರಡನೇ ಸೆಟ್ನಲ್ಲಿ ಗುಲ್ಬಿಸ್ ಪೂರ್ಣ ಪಾರಮ್ಯ ಮೆರೆದರು. ಒಂದು ತಾಸು 20 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.
ಪ್ರಜ್ಚೇಶ್ ನಿರ್ಗಮನದೊಂದಿಗೆ ಸಿಂಗಲ್ಸ್ ಕ್ವಾಲಿಫೈಯರ್ಸ್ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ.
ಸುಮಿತ್ ನಗಾಲ್ ಅವರು ಗುರುವಾರ ಈಜಿಪ್ಟ್ನ ಮೊಹಮ್ಮದ್ ಸಫ್ವಾತ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋತಿದ್ದರು. ರಾಮಕುಮಾರ್ ರಾಮನಾಥನ್ ಹಾಗೂ ಅಂಕಿತಾ ರೈನಾ ಅವರ ಅಭಿಯಾನ ಮಂಗಳವಾರ ಮೊದಲ ಸುತ್ತಿನಲ್ಲೇ ಕೊನೆಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.