ನವದೆಹಲಿ (ಪಿಟಿಐ): ಭಾರತದ ಯುವ ಆಟಗಾರ ಶಶಿಕುಮಾರ್ ಮುಕುಂದ್ ಅವರು ಇದೇ ತಿಂಗಳ 29 ಮತ್ತು 30ರಂದು ಕಜಕಸ್ತಾನದ ನೂರ್ ಸುಲ್ತಾನ್ನಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಡೇವಿಸ್ ಕಪ್ ಟೆನಿಸ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
ಪಾಕ್ ಎದುರಿನ ಪಂದ್ಯಕ್ಕೆ ಪ್ರಕಟಿಸಲಾಗಿದ್ದ ಭಾರತ ತಂಡದಲ್ಲಿ ಶಶಿಕುಮಾರ್ ಅವರು ಕಾಯ್ದಿರಿಸಿದ ಆಟಗಾರನಾಗಿ ಸ್ಥಾನ ಪಡೆದಿದ್ದರು.
‘ಪೋರ್ಚುಗಲ್ನಲ್ಲಿ ನಡೆದ ಟೂರ್ನಿಯೊಂದರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಪುರವ ರಾಜಾ ಜೊತೆಗೂಡಿ ಆಡುವ ವೇಳೆ ಶಶಿಕುಮಾರ್ ಅವರ ಪಾದಕ್ಕೆ ಗಾಯವಾಗಿದೆ. ಹೀಗಾಗಿ ಪಾಕ್ ಎದುರಿನ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಈ ವಿಷಯವನ್ನು ನಮ್ಮ ಗಮನಕ್ಕೂ ತಂದಿದ್ದಾರೆ’ ಎಂದು ಭಾರತ ತಂಡದ ಕೋಚ್ ಜೀಶನ್ ಅಲಿ ಹೇಳಿದ್ದಾರೆ.
‘ಶಶಿಕುಮಾರ್ ಬದಲು ಎನ್.ಶ್ರೀರಾಮ್ ಬಾಲಾಜಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದುಕೊಂಡಿದ್ದೇವೆ. ಆದರೆ ಅವರಿಗೆ ಕಜಕಸ್ತಾನದ ವೀಸಾ ಸಿಗುವುದು ಕಷ್ಟವಾಗಬಹುದು’ ಎಂದೂ ಅವರು ತಿಳಿಸಿದ್ದಾರೆ.
ದೆಹಲಿ ಲಾನ್ ಟೆನಿಸ್ ಸಂಸ್ಥೆಯ (ಡಿಎಲ್ಟಿಎ) ಅಂಗಳದಲ್ಲಿ ಭಾರತ ಡೇವಿಸ್ ಕಪ್ ತಂಡದ ಆಟಗಾರರು ಗುರುವಾರದಿಂದ ಅಭ್ಯಾಸ ನಡೆಸುತ್ತಿದ್ದು ಇದರಲ್ಲಿ ಶ್ರೀರಾಮ್ ಕೂಡಾ ಭಾಗವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.