ADVERTISEMENT

ಶುಕ್ರನಲ್ಲಿ ಸಾಗರ ಸೃಷ್ಟಿಯಾಗಿರಲಿಲ್ಲ: ಅಧ್ಯಯನದಿಂದ ಬಹಿರಂಗ

ಐಎಎನ್ಎಸ್
Published 17 ಅಕ್ಟೋಬರ್ 2021, 11:48 IST
Last Updated 17 ಅಕ್ಟೋಬರ್ 2021, 11:48 IST
ಶುಕ್ರಗ್ರಹ
ಶುಕ್ರಗ್ರಹ    

ಲಂಡನ್‌: ಶುಕ್ರನಲ್ಲಿ ನೀರಿನ ಸಾಗರವಿದ್ದ ವಾದವನ್ನು ಹೊಸ ಅಧ್ಯಯನವೊಂದು ಅಲ್ಲಗೆಳೆದಿದೆ.

ಜಿನೀವಾ ವಿಶ್ವವಿದ್ಯಾಲಯ (ಯುಎನ್‌ಐಜಿಇ) ಮತ್ತು ಸ್ವಿಟ್ಜರ್ಲೆಂಡ್‌ನ ‘ನ್ಯಾಷನಲ್ ಸೆಂಟರ್ ಆಫ್ ಕಾಂಪಿಟೆನ್ಸ್ ಇನ್ ರಿಸರ್ಚ್ (ಎನ್‌ಸಿಸಿಆರ್‌) ಪ್ಲಾನೆಟ್ಸ್’ ನೇತೃತ್ವದ ಖಗೋಳ ಭೌತವಿಜ್ಞಾನಿಗಳ ತಂಡವು ಭೂಮಿ ಮತ್ತು ಶುಕ್ರನ ಸಾಮ್ಯತೆಗಳ ಕುರಿತು ಅಧ್ಯಯನ ನಡೆಸಿದೆ.

ಭೂಮಿಯ ಪ್ರಸ್ತುತ ವಾತಾವರಣ ಮತ್ತು ಭವಿಷ್ಯದ ವಿಕಾಸವನ್ನು ಅಧ್ಯಯನ ಮಾಡಲು ಬಳಸಲಾಗುವ ವಾತಾವರಣದ ಅತ್ಯಾಧುನಿಕ ಮೂರು-ಆಯಾಮದ ಮಾದರಿಗಳನ್ನು ಬಳಸಿ ವಿಜ್ಞಾನಿಗಳು ಭೂಮಿ ಮತ್ತು ಶುಕ್ರನ ವಾತಾವರಣವನ್ನು ಅಧ್ಯಯನ ಮಾಡಿದ್ದಾರೆ. ಎರಡು ಗ್ರಹಗಳ ವಾತಾವರಣವು ಕಾಲಾನಂತರದಲ್ಲಿ ಹೇಗೆ ವಿಕಸನಗೊಂಡವು, ಈ ಪ್ರಕ್ರಿಯೆಯಲ್ಲಿ ಸಾಗರಗಳು ಹೇಗೆ ರೂಪುಗೊಂಡಿರಬಹುದು ಎಂಬುದರ ಕುರಿತು ತಂಡ ಸಂಶೋಧನೆ ನಡೆಸಿದೆ.

ADVERTISEMENT

‘ಶುಕ್ರನ ಮೇಲಿನ ಹವಾಮಾನ ಪರಿಸ್ಥಿತಿಗಳು ಅಲ್ಲಿನ ವಾತಾವರಣದಲ್ಲಿ ನೀರಿನ ಆವಿಯನ್ನು ಸಾಂದ್ರೀಕರಿಸಲು ಬಿಡುವುದಿಲ್ಲ ಎಂಬುದು ನಮ್ಮ ಅಧ್ಯಯನಗಳಿಂದ ಗೊತ್ತಾಗಿದೆ’ ಎಂದು ಯುಎನ್‌ಐಜಿಇಯ ವಿಜ್ಞಾನ ವಿಭಾಗದ, ಖಗೋಳ ಭೌತಶಾಸ್ತ್ರಜ್ಞ ಮತ್ತು ಸಂಶೋಧಕ ಮಾರ್ಟಿನ್ ಟರ್ಬೆಟ್ ತಿಳಿಸಿದ್ದಾರೆ.

ಇದರ ಅರ್ಥವೇನೆಂದರೆ, ಶುಕ್ರನ ವಾತಾವರಣದಲ್ಲಿರುವ ನೀರು ಮಳೆಹನಿಯಾಗಿ ಅದರ ಮೇಲೆ ಬೀಳುವಷ್ಟರ ಮಟ್ಟಿಗೆ ಅಲ್ಲಿನ ತಾಪಮಾನವು ಕಡಿಮೆ ಆಗಿಯೇ ಇಲ್ಲ. ಹೀಗಾಗಿ ಮಳೆ ನೀರು ಶುಕ್ರನ ಒಡಲಲ್ಲಿ ಬಿದ್ದು ಸಾಗರ ಸೃಷ್ಟಿಯಾಗುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಶುಕ್ರನ ಬಿಸಿಯಾದ ವಾತಾವರಣದ ಕಾರಣದಿಂದಾಗಿ ನೀರು ಅನಿಲವಾಗಿ ಉಳಿದಿದೆ ಮತ್ತು ಸಾಗರ ಎಂದಿಗೂ ರೂಪುಗೊಂಡಿರಲಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
‘ನೇಚರ್’ ಎಂಬ ನಿಯತಕಾಲಿಕೆಯಲ್ಲಿ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.