ಬೆಂಗಳೂರು:ಹೇರೋಹಳ್ಳಿ ಮುಖ್ಯ ರಸ್ತೆ ಇದ್ದಕ್ಕಿದ್ದಂತೆ ಚಂದ್ರನ ಅಂಗಳವಾಗಿ ಪರಿವರ್ತನೆಯಾಯಿತೇ? ಗಗನಯಾತ್ರಿಗಳ ಬದಲು ಕಲಾವಿದರೇ ಚಂದ್ರನಲ್ಲಿ ಕಾಲಿಟ್ಟರೇ! ಖಂಡಿತಾ ಇಲ್ಲ. ರಸ್ತೆ ಅವ್ಯವಸ್ಥೆಯ ಬಗ್ಗೆ ಕಲಾವಿದಬಾದಲ್ ನಂಜುಂಡಸ್ವಾಮಿ ಅವರ ಪರಿಕಲ್ಪನೆಯಲ್ಲಿ ನಡೆದವಿಭಿನ್ನ ಪ್ರತಿಭಟನೆಯೇ ಈ ಕುತೂಹಲಕ್ಕೆ ಕಾರಣ.
ವಿನೂತನ ಪ್ರತಿಭಟನೆಯ ಮೂಲಕ ರಸ್ತೆ ಗುಂಡಿ, ಅವ್ಯವಸ್ಥೆ ಕುರಿತು ಬಿಬಿಎಂಪಿ ಗಮನ ಸೆಳೆಯುವಲ್ಲಿ ನಂಜುಂಡಸ್ವಾಮಿ ಮತ್ತು ನಟಪೂರ್ಣಚಂದ್ರ ಯಶಸ್ವಿಯಾಗಿದ್ದಾರೆ.
ಹೇರೋಹಳ್ಳಿ ಮುಖ್ಯರಸ್ತೆಯ ಅವ್ಯವಸ್ಥೆ ವಿರೋಧಿಸಿ ಮತ್ತು ಆ ಬಗ್ಗೆ ಆಡಳಿತದ ಗಮನ ಸೆಳೆಯುವುದಕ್ಕಾಗಿ ನಂಜುಂಡಸ್ವಾಮಿ ಅವರ ಪರಿಕಲ್ಪನೆ ಮೇರೆಗೆ ಪೂರ್ಣಚಂದ್ರ ಅವರುಇತ್ತೀಚೆಗೆ ಗಗನಯಾತ್ರಿಯ ವೇಷ ಧರಿಸಿದ್ದಾರೆ. ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ನಡೆದಾಡುವಂತೆಯೇ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆದಾಡಿದ್ದಾರೆ. ಈ ದೃಶ್ಯವನ್ನು ವಿಡಿಯೊ ಚಿತ್ರೀಕರಣ ಮಾಡಿಸಿದ್ದಲ್ಲದೆ, ಸೋಮವಾರ (ಸೆಪ್ಟೆಂಬರ್ 2) ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವು ವೈರಲ್ ಆಗಿವೆ.
ಫೇಸ್ಬುಕ್ ಪೋಸ್ಟ್ ಈವರೆಗೆ 31 ಸಾವಿರ ಶೇರ್ ಆಗಿದ್ದು, 2,300ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ನಲ್ಲಿಯೂ ವಿಡಿಯೊ ವೈರಲ್ ಆಗಿದೆ. ಅನೇಕ ಸುದ್ದಿ ಮಾಧ್ಯಮಗಳೂ, ಸುದ್ದಿ ತಾಣಗಳೂ ವಿಡಿಯೊ ಹಂಚಿಕೊಂಡಿದ್ದಲ್ಲದೆ ಸುದ್ದಿಯನ್ನೂ ಪ್ರಕಟಿಸಿವೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಿದೆ.
ಇದೀಗ ರಸ್ತೆ ದುರಸ್ತಿ ಕಾಮಗಾರಿಯ ವಿಡಿಯೊವನ್ನೂ ಪೋಸ್ಟ್ ಮಾಡಿರುವ ನಂಜುಂಡಸ್ವಾಮಿ ಅವರು, ‘ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆಗಳು. ಕಾಮಗಾರಿ ಪ್ರಗತಿಯಲ್ಲಿದೆ. ಬಿಬಿಂಎಪಿ ತ್ವರಿತವಾಗಿ ಸ್ಪಂದಿಸಿದೆ. ಬಿಬಿಎಂಪಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.