ADVERTISEMENT

ಕಾಯಿಲೆ ದೂರವಿಡುವ ಚೆರ್ರಿ

ಶಾಂತರಾಜು ಎಸ್‌.
Published 25 ಆಗಸ್ಟ್ 2014, 19:30 IST
Last Updated 25 ಆಗಸ್ಟ್ 2014, 19:30 IST

ನೆಲಮಂಗಲ- ತಾವರೆಕೆರೆ ರಸ್ತೆಯಲ್ಲಿರುವ ಸೊಂಡೇಕೊಪ್ಪ, ಮಂಟನಕುರ್ಚಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಕ್ಕರೆ ಕಾಯಿಲೆ ಇರುವವರು ಸಿಗುವುದು ಅಪರೂಪ. 50 ದಾಟಿದವರಲ್ಲಂತೂ ತೀರಾ ವಿರಳವೆನ್ನಬಹುದು. ಈ ಭಾಗದಲ್ಲಿ ಅಲ್ಲಲ್ಲಿ ಸಿಗುವ ಚೆರ್ರಿ (ಭಾರತೀಯ ಮಳೆಗಾಲದ ಚೆರ್ರಿ, ಕಾಡು ಚೆರ್ರಿ)ಯ ಬಳಕೆ ಇದಕ್ಕೆ ಕಾರಣ. ಆಯುರ್ವೇದದಲ್ಲೂ ಇದರ ಬಗೆಗೆ ಉಲ್ಲೇಖವಿದೆ.

ಸಕ್ಕರೆ ಕಾಯಿಲೆಗೆ ಮಾತ್ರವಲ್ಲದೇ ರಕ್ತವನ್ನು ಶುದ್ಧೀಕರಿಸುವ ಮತ್ತು ಪಂಚೇಂದ್ರಿಯಗಳನ್ನು ಚುರುಕುಗೊಳಿಸುವ ಶಕ್ತಿಯನ್ನು ಈ ಕಾಡುಚೆರ್ರಿ ಹಣ್ಣಿನ ಗುಣ ಎನ್ನಲಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಿ, ತಹಬದಿಗೆ ತರುವಲ್ಲಿ ಚೆರ್ರಿಯ ಪಾತ್ರ ಪ್ರಮುಖವಾಗಿದೆ. ಇದಲ್ಲದೇ ಹೃದಯ ಸಂಬಂಧಿ ರೋಗಗಳಿಗೆ ಮತ್ತು  ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುವ ಶಕ್ತಿಯನ್ನು ಇದು ಹೊಂದಿದೆ.

ಮುಂಗಾರಿನ ಆರಂಭದಲ್ಲಿ ಹಣ್ಣು ಬಿಡಲು ಶುರುವಿಟ್ಟು, ಮಳೆಗಾಲ ಮುಗಿಯುವವರೆಗೂ ಇಡೀ ಮರ ಕೆಂಪು ಹಣ್ಣುಗಳಿಂದ ಆವೃತವಾಗಿರುತ್ತದೆ. ಹಣ್ಣಿನ ಗಿಡವಾದ್ದರಿಂದ ನಾನಾ ಬಗೆಯ ಜೇನುಹುಳುಗಳು ಮತ್ತು ಪಕ್ಷಿಗಳಿಂದ ಪರಾಗಸ್ಪರ್ಷ ವೇಗ ಪಡೆದುಕೊಂಡು, ಒಂದು ಬಾರಿ ಹಣ್ಣು ಬಿಟ್ಟ ನಂತರ, ಒಂದೇ ವಾರದಲ್ಲೇ ಮತ್ತೆ ಹಣ್ಣಿನಿಂದ ಆವೃತವಾಗುತ್ತದೆ. ಸಿಹಿ ಮತ್ತು ಹುಳಿ ಎರಡನ್ನು ಹೊಂದಿರುವ ಈ ಹಣ್ಣು ತಿನ್ನಲು ರುಚಿಕರವಾಗಿದೆ.

ನೆಲಮಂಗಲದ ಮಂಟನಕುರ್ಚಿ ಗ್ರಾಮದಲ್ಲಿನ ಲೇಖಕ ಎಲ್.ಸಿ ನಾಗರಾಜ್ ಅವರ ತೋಟದಲ್ಲಿ ಎರಡು ಬಗೆಯ ಚೆರ್ರಿ ಮರಗಳಿವೆ. ಇವುಗಳ ಹಣ್ಣುಗಳಿಗಾಗಿ ಪಟ್ಟಣದಿಂದ ಅನೇಕ ಗೆಳೆಯರು ನಾಗರಾಜ್ ಅವರ ತೋಟಕ್ಕೆ ಲಗ್ಗೆ ಇಡುತ್ತಾರೆ. ‘ವರ್ಷಗಳಿಂದ ಚೆರ್ರಿ ಹಣ್ಣನ್ನು ಬಳಸುತ್ತಿದ್ದೇವೆ. ನಮಗೆ ಸಕ್ಕರೆ ಕಾಯಿಲೆಯಂತಹ ಯಾವುದೇ ರೋಗಗಳಿಲ್ಲ. ಚೆರ್ರಿ ಹಣ್ಣಿನಿಂದಾಗಿ ನನ್ನ ತಾಯಿಯ ಕಾಲು-ಮಂಡಿ ನೋವು ಕಡಿಮೆಯಾಗಿದೆ’ ಎನ್ನುತ್ತಾರೆ

ಲೇಖಕಿ ಪದ್ಮ ಚಿನ್ಮಯಿ. ಚೆರ್ರಿ ಗಿಡ ಎತ್ತರವಾಗಿ ಬೆಳೆಯುವ ಮರವೇನಲ್ಲ. ಪೊದೆಯಂತೆ ಬೆಳೆಯುವ ಸಸ್ಯವೆಂದರೂ ತಪ್ಪಾಗಲಾರದು. ಮನೆಯ ಮುಂದೆ ಕೆಲವೇ ಅಡಿಗಳಷ್ಟು ಜಾಗವಿದ್ದರೂ ಸಾಕು, ಚೆರ್ರಿ ಬೆಳೆಯಬಹುದು. ಬೇರುಗಳು ಆಳವಾಗಿ ಬೆಳೆಯದೇ ಇರುವುದರಿಂದ ಮನೆಯ ಅಡಿಪಾಯಕ್ಕೇನೂ ತೊಂದರೆ ಇಲ್ಲ. ಅಲ್ಲದೇ ಪೊದೆಯಂತೆ ಅಗಲವಾಗಿ ಬೆಳೆಸಬಹುದಾದ್ದರಿಂದ, ಮಳೆ ಮತ್ತು ಬಿಸಿಲು ನೇರವಾಗಿ ಗೋಡೆಗೆ ಬೀಳದಂತೆ, ಗೋಡೆಗಳಿಗೆ ವರ್ಷಾನುವರ್ಷಗಳ ವರೆಗೆ ಸ್ವಾಭಾವಿಕ ಸಂರಕ್ಷಣೆ ನೀಡುತ್ತದೆ. ಆಸಕ್ತರು ಸಸಿಗಳಿಗಾಗಿ ಎಲ್.ಸಿ.ನಾಗರಾಜ್ ಅವರನ್ನು ಸಂಪರ್ಕಿಸಬಹುದು: 9880116198.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.