ADVERTISEMENT

ಬರ: ಹೇಗೆ, ಎಂತು?

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
ಬರ: ಹೇಗೆ, ಎಂತು?
ಬರ: ಹೇಗೆ, ಎಂತು?   

* ಬರ ಎಂದರೇನು?

ಅತಿ ಕಡಿಮೆ ಪ್ರಮಾಣದ ಮಳೆಯಿಂದಾಗಿ ದೀರ್ಘ ಕಾಲ ಒಣಹವೆ ಇರುವ ಸ್ಥಿತಿಯೇ ಬರಗಾಲ. ತಿಂಗಳುಗಟ್ಟಲೆ ಹಾಗೂ ವರ್ಷಗಟ್ಟಲೆ ಇಂಥ ಸ್ಥಿತಿಯನ್ನು ಜನ ಎದುರಿಸಿರುವ ಉದಾಹರಣೆಗಳಿವೆ. ಯಾವುದೇ ಹವಾಗುಣವಿರುವ ಭೌಗೋಳಿಕ ಪ್ರದೇಶದಲ್ಲಿ ಬರಗಾಲ ಎದುರಾಗಬಹುದು. ಸ್ಥಳೀಯ ಬೆಳೆಗಳ, ಪ್ರಾಣಿಗಳ ಹಾಗೂ ಜನಜೀವನದ ಮೇಲೆ ಬರಗಾಲವು ದುಷ್ಪರಿಣಾಮ ಉಂಟುಮಾಡುತ್ತದೆ.

* ಇದಕ್ಕೆ ಪ್ರಕೃತಿಸಹಜ ಕಾರಣಗಳೇನು?

ADVERTISEMENT

ಸಾಮಾನ್ಯವಾಗಿ ಆಗುವ ಮಳೆಯ ಪ್ರಮಾಣದಲ್ಲಿ ವ್ಯತ್ಯಯವಾದಾಗ ಜಲಮೂಲಗಳು ಬತ್ತಿಹೋಗುತ್ತವೆ. ನದಿಗಳು ಒಣಗುತ್ತವೆ.

* ಮನುಷ್ಯನ ಚಟುವಟಿಕೆಗೂ ಬರಗಾಲಕ್ಕೂ ಸಂಬಂಧವಿದೆಯೇ?

ಇದೆ. ಕೃಷಿಭೂಮಿ ಸಿದ್ಧಪಡಿಸಲು, ಮನೆಗಳ ನಿರ್ಮಾಣಕ್ಕೆ ಜಾಗ ಮಾಡಿಕೊಳ್ಳಲು ಮರಗಳನ್ನು ಕಡಿಯುತ್ತಾರೆ. ಉರುವಲಿಗಾಗಿಯೂ ಮರಗಳಿಗೆ ಕೊಡಲಿ ಹಾಕುವವರಿದ್ದಾರೆ. ಅಣೆಕಟ್ಟೆಗಳ ನಿರ್ಮಾಣ ಹಾಗೂ ಆರ್ಥಿಕ ಅಭಿವೃದ್ಧಿಯ ಸಲುವಾಗಿ ಕೈಗೊಳ್ಳುವ ಚಟುವಟಿಕೆಯಿಂದ ಮಣ್ಣಿನ ತೇವಾಂಶ ಹೀರಿಕೊಳ್ಳುವ ಶಕ್ತಿ ಕುಂದುತ್ತದೆ.

ಅಣೆಕಟ್ಟೆಗಳು ನೀರನ್ನು ಹಿಡಿದಿಟ್ಟುಕೊಳ್ಳಬಲ್ಲವು, ನಿಜ. ಆದರೆ, ನೀರಿನ ಹರಿವಿನ ವ್ಯಾಪ್ತಿಯನ್ನು ಅದು ನಿಯಂತ್ರಿಸುವುದರಿಂದ ಒಟ್ಟಾರೆ ಪರಿಸರ ಸಮತೋಲನದಲ್ಲಿ ಏರುಪೇರಾಗುತ್ತದೆ.

ಈ ಬೆಳವಣಿಗೆಗಳಿಂದ ಜಾಗತಿಕ ತಾಪಮಾನ ಕೂಡ ಹೆಚ್ಚಾಗುತ್ತದೆ. ತಾಪಮಾನ ಹೆಚ್ಚಾದಂತೆಲ್ಲ ಶುಷ್ಕ ಹವೆ ವ್ಯಾಪಕವಾಗಿಮ ಬರ ಪರಿಸ್ಥಿತಿ ಉದ್ಭವವಾಗುತ್ತದೆ.

* ಅದರ ಪರಿಣಾಮಗಳೇನು?

ಬರಗಾಲವು ಪರಿಸರದ ಮೇಲಷ್ಟೇ ದುಷ್ಪರಿಣಾಮ ಬೀರುವುದಿಲ್ಲ, ಸಮಾಜೋ-ಆರ್ಥಿಕ ಪರಿಣಾಮಗಳನ್ನೂ ಬೀರುತ್ತದೆ. ಬೆಳೆ ನಾಶದಲ್ಲಿ ಪರ್ಯವಸಾನಗೊಳ್ಳುತ್ತದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತದೆ. ನೀರಾವರಿ ಇಲ್ಲದೆ ನಲುಗುವ ಜನ ವಲಸೆ ಹೊರಡುತ್ತಾರೆ. ಒಣಹವೆಯಿಂದ ಕಾಡ್ಗಿಚ್ಚು ಮೂಡುತ್ತದೆ. ಅದರಿಂದ ಇನ್ನಷ್ಟು ಅರಣ್ಯ ನಾಶ.

* ಬರ ಪರಿಸ್ಥಿತಿಯನ್ನು ನಿರ್ವಹಿಸುವುದು ಹೇಗೆ?

ಸರಿಯಾದ ನಿರ್ವಹಣೆಯಿಂದ ಬರದ ತೀವ್ರತೆಯನ್ನು ಕಡಿಮೆ ಮಾಡಬಹುದು. ಮಳೆ ನೀರಿನ ಸಂಗ್ರಹ, ನೀರಿನ ಪುನರ್ ಬಳಕೆ, ಬೆಳೆಗಳನ್ನು ಆವರ್ತನ ಕ್ರಮದಲ್ಲಿ ಬೆಳೆಯುವುದು ಸಮರ್ಪಕ ನೀರಾವರಿ ಇವುಗಳಿಂದ ಬರ ಪರಿಸ್ಥಿತಿಯನ್ನು ನಿರ್ವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.