ಮಳೆನೀರು ಸಂಗ್ರಹವು ಅತಿ ಹಳೆಯ ವಿಧಾನ. ಭಾರತದಲ್ಲಿ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತದೆ. ಸುರಿಯುವ ಮಳೆಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಜನರ ನೀರಿನ ಅವಶ್ಯಕತೆ ಪೂರೈಸಿಕೊಳ್ಳುವುದು ಕಷ್ಟವಾಗಲಾರದು. ತಾರಸಿ ಮೇಲೆ ಹಾಗೂ ಜಮೀನಿನಲ್ಲಿ ಸುರಿಯುವ ಮಳೆಯ ನೀರು ಹರಿದು ಸೇರುವಂಥ ಗುಂಡಿಗಳನ್ನು ತೆಗೆಯಬೇಕು. ಅವುಗಳಲ್ಲಿ ಸಂಗ್ರಹವಾಗುವ ನೀರು ಅಂತರ್ಜಲ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ.
ಗೃಹ ಬಳಕೆಗೆ ಅಗತ್ಯವಿರುವಷ್ಟನ್ನು ವರ್ಷವಿಡೀ ಬಳಸಲು ಮಳೆನೀರೇ ಸಾಕು. ತೋಟಗಳಲ್ಲಿ ತೆರೆದ ಬಾವಿಗಳನ್ನು ಹಾಗೂ ಸುತ್ತ ಕಾಲುವೆಗಳನ್ನು ನಿರ್ಮಿಸಿ ನೀರು ಹಾಯಿಸುವುದರಿಂದ ಬೆಳೆಗೂ ಅನುಕೂಲ. ಕಾಲುವೆಗಳ ಸುತ್ತ ಮರಗಳನ್ನು ಬೆಳೆಸುವ ಪರಿಪಾಠವಿದೆ. ಇದರಿಂದ ನೀರು ಬೇಗ ಬತ್ತಿಹೋಗುವುದಿಲ್ಲ. ಈ ನೀರನ್ನು ಬಳಸಿ ಅಕ್ಕಡಿ ಬೆಳೆ ತೆಗೆಯಲು ಸಾಧ್ಯವಿದೆ. ಅವನ್ನು ಸಾಕುಪ್ರಾಣಿಗಳಿಗೆ ಮೇವಾಗಿ ಪರಿವರ್ತಿಸಬಹುದು.
ಇದು ನಿಮಗೆ ಗೊತ್ತೆ?
1980ರ ದಶಕದಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರಾಲೇಗಾಂವ್ ಸಿದ್ದಿಯಲ್ಲಿನ ಬರಗಾಲಕ್ಕೆ ಅಂತ್ಯ ಹಾಡಿದರು. ಮಹಾರಾಷ್ಟ್ರದ ಔರಂಗಾಬಾದ್ನಲ್ಲಿನ ಗ್ರಾಮ ಅದು. ಬೆಟ್ಟತಪ್ಪಲು ಪ್ರದೇಶದಿಂದ ನೀರನ್ನು ಕೆಳಮಟ್ಟಕ್ಕೆ ಹಾಯಿಸಿ, ಕೊಳದಲ್ಲಿ ಅವರು ಶೇಖರಣೆ ಮಾಡಿದರು. ಆನಂತರ ಗ್ರಾಮದಲ್ಲಿ ನೀರಿನ ಸಮಸ್ಯೆಯೇ ಉದ್ಭವಿಸಿಲ್ಲ.
ನೀವೂ ಮಾಡಬಹುದಾದದ್ದು...
ಖಾಲಿ ಬಕೆಟ್ಗಳನ್ನು ಮನೆಯ ಮಹಡಿ ಮೇಲೆ ಅಥವಾ ಕಾಂಪೌಂಡ್ನಲ್ಲಿ ಇಡಿ. ಪ್ರತಿ ಬಕೆಟ್ ಮೇಲೆ ಶುಚಿಯಾದ ಬಟ್ಟೆಯನ್ನು ಹಾಕಿ. ಮಳೆನೀರು ಶುದ್ಧೀಕರಣಗೊಂಡು ಸಂಗ್ರಹವಾಗುತ್ತದೆ. ಇಂಥ ನೀರನ್ನು ಅಡುಗೆ ಮಾಡಲು, ವಸ್ತುಗಳನ್ನು ತೊಳೆಯಲು, ಶೌಚಾಲಯ ಶುಚಿಗೊಳಿಸಲು ಕೂಡ ಬಳಸಬಹುದು. ನೀರನ್ನು ಯಾವುದೇ ಕಾರಣಕ್ಕೂ ಹಾಳು ಮಾಡಬೇಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.