ಮಂಗಳೂರು: ಕರ್ಣಾಟಕ ಬ್ಯಾಂಕ್ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹133.85 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭ ಶೇ 10.13 ರಷ್ಟು ಹೆಚ್ಚಾಗಿದೆ.
ನಿರ್ವಹಣಾ ಲಾಭದಲ್ಲಿಯೂ ವೃದ್ಧಿಯಾಗಿದ್ದು, ₹309.70 ಕೋಟಿ ದಾಖಲಿಸಿದೆ. ಬಡ್ಡಿ ಆದಾಯದಲ್ಲಿ ಶೇ 16.38 ರಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ ₹ 424.42 ಕೋಟಿಯಾಗಿದೆ.
ಬ್ಯಾಂಕ್ ಒಟ್ಟಾರೆ ₹94,711 ಕೋಟಿ ವಹಿವಾಟು ನಡೆಸಿದ್ದು, ಶೇ 9.56 ರಷ್ಟು ವೃದ್ಧಿಯಾಗಿದೆ. ₹56,227 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ₹38,946 ಕೋಟಿ ಸಾಲ ವಿತರಿಸಲಾಗಿದೆ.
ಚಾಲ್ತಿ ಮತ್ತು ಉಳಿತಾಯ ಖಾತೆಯ ಠೇವಣಿ ಪ್ರಮಾಣದಲ್ಲಿಯೂ ಹೆಚ್ಚಳವಾಗಿದ್ದು, ಒಟ್ಟು ಠೇವಣಿಯ ಶೇ 28.94 ರಷ್ಟಾಗಿದೆ.
ಪ್ರಗತಿಯ ಕುರಿತು ಹರ್ಷ ವ್ಯಕ್ತಪಡಿಸಿರುವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ‘ಸಾಲ ವಿತರಣೆಯಲ್ಲಿನ ವೃದ್ಧಿ ಹಾಗೂ ನಿರ್ವಹಣಾ ಲಾಭದಲ್ಲಿನ ಏರಿಕೆಯಿಂದಾಗಿ ಬ್ಯಾಂಕ್ ಪ್ರಗತಿಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ಅನುತ್ಪಾದಕ ಸಾಲ (ಎನ್ಪಿಎ) ನಿರ್ವಹಣೆ ಹಾಗೂ ಚಾಲ್ತಿ ಮತ್ತು ಉಳಿತಾಯ ಖಾತೆಯ ಠೇವಣಿ, ಡಿಜಿಟಲ್ ಬ್ಯಾಂಕಿಂಗ್, ಸಾಲ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಂದಿನ 9 ತಿಂಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಗುರಿ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.