ನವದೆಹಲಿ:‘2017-18ನೇ ಹಣಕಾಸು ವರ್ಷದಲ್ಲಿ ₹ 2.82 ಲಕ್ಷ ಕೋಟಿಗಳಷ್ಟು ವರಮಾನವು ಸೆಸ್ ಮತ್ತು ಸರ್ಚಾರ್ಜ್ಗಳ ಮೂಲಕ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ವರಮಾನ ಘೋಷಣೆ ಯೋಜನೆ–2016’ಯಡಿ, ತೆರಿಗೆಯ ಶೇ 25ರಷ್ಟು ಕೃಷಿ ಕಲ್ಯಾಣ್ ಸೆಸ್ ವಿಧಿಸಲಾಗಿತ್ತು. ಇದು ಘೋಷಿತ ವರಮಾನದ ಶೇ 7.5ರಷ್ಟಿತ್ತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ತೆರಿಗೆಯ ಶೇ 33ರಷ್ಟು ಸರ್ಚಾರ್ಜ್ ವಿಧಿಸಲಾಗಿತ್ತು.
‘ಪ್ರತಿ ವರ್ಷ ಸರ್ಕಾರವು ವರಮಾನ ತೆರಿಗೆ ಮೇಲೆ ಶೇ 2ರಷ್ಟು ಶಿಕ್ಷಣ ಸೆಸ್ ಮತ್ತು ಶೇ 1ರಷ್ಟು ಉನ್ನತ ಶಿಕ್ಷಣ ಸೆಸ್ ವಿಧಿಸುತ್ತಿದೆ. ತೆರಿಗೆಗೆ ಒಳಪಡುವ ವರಮಾನವು ₹ 50 ಲಕ್ಷದಿಂದ ₹ 1 ಕೋಟಿ ಇರುವ ಸಂದರ್ಭದಲ್ಲಿ ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬಗಳ ಮೇಲೆ 2017–18ನೇ ಹಣಕಾಸು ವರ್ಷದಲ್ಲಿ ಶೇ 10ರಷ್ಟು ಹೊಸ ಸರ್ಚಾರ್ಜ್ ವಿಧಿಸಲು ಸರ್ಕಾರ ಉದ್ದೇಶಿಸಿದೆ’ ಎಂದು ಅವರು ಪ್ರಶ್ನೋತ್ತರ ಸಂದರ್ಭದಲ್ಲಿ ಲೋಕಸಭೆಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.