ADVERTISEMENT

ಚರಂಡಿಗೆ ಶೌಚಾಲಯ ಸಂಪರ್ಕ– ಕ್ರಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:56 IST
Last Updated 28 ನವೆಂಬರ್ 2017, 6:56 IST
ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಸಭೆಯಲ್ಲಿ ಮಾತನಾಡಿದರು. ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಆಯುಕ್ತೆ ಎಂ.ವಿ.ತುಷಾರಮಣಿ ಇದ್ದಾರೆ.
ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಸಭೆಯಲ್ಲಿ ಮಾತನಾಡಿದರು. ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಆಯುಕ್ತೆ ಎಂ.ವಿ.ತುಷಾರಮಣಿ ಇದ್ದಾರೆ.   

ಚಿಕ್ಕಮಗಳೂರು: ನಗರದ ಕೆಲ ಮನೆಯವರು ಚರಂಡಿಗೆ ಶೌಚಾಲಯ ಸಂಪರ್ಕ ಕಲ್ಪಿಸಿಕೊಂಡಿದ್ದು, ಸ್ಥಳ ಪರಿಶೀಲಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ತಿಳಿಸಿದರು.

ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಎಲ್ಲ ವಾರ್ಡ್‌ಗಳಲ್ಲೂ ಪರಿಶೀಲನೆ ನಡೆಸಿ, ಯುಜಿಡಿ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಸದಸ್ಯ ರೂಬೆನ್ ಮೊಸೆಸ್ ಮಾತನಾಡಿ, ‘ಕ್ರಿಶ್ಚಿಯನ್ ಕಾಲೋನಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆ. ಎಲ್ಲ 35 ವಾರ್ಡ್‌ಗಳಿಗೆ ಯುಜಿಡಿ ಅಗತ್ಯ ಇದೆ. ನಗರಸಭೆಯಿಂದ ಶೀಘ್ರವಾಗಿ ಯುಜಿಡಿ ಸಂಪರ್ಕ ಕಲ್ಪಿಸಬೇಕು’ ಎಂದರು.

ADVERTISEMENT

ಗೌರಿ ಕಾಲುವೆ ವಾರ್ಡಿಗೆ ವಿದ್ಯುತ್ ಕಂಬ ನೆಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಲು ಹಲವಾರು ಬಾರಿ ಮೆಸ್ಕಾಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಈಚೆಗೆ ಕೊರೆದಿರುವ ಕೊಳವೆ ಬಾಳಿಗಳಿಂದ ನೀರನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ವಿದ್ಯುತ್ ಕಂಬ ನೆಡಲು ಅರ್ಜಿ ನೋಂದಾಯಿಸಲಾಗಿದೆ. ಶುಲ್ಕ ಪಾವತಿಸಿದರೆ ಕಾರ್ಯಾದೇಶ ನೀಡಲಾಗುವುದು ಎಂದು ಮೆಸ್ಕಾಂ ಎಇಇ ಜಾಹ್ನವಿ ತಿಳಿಸಿದರು.

ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ಮೂಲಸೌಕರ್ಯ ಒದಗಿಸಬಾರದು. ನಗರಸಭೆ ವ್ಯಾಪ್ತಿಯಲ್ಲಿನ ಅಂಗಡಿ ಮಳಿಗೆಗಳನ್ನು ಹರಾಜಿನಲ್ಲಿ ಪಡೆದವರು ಒಳ ಒಪ್ಪಂದ ಮಾಡಿಕೊಂಡು ಬೇರೆಯವರಿಗೆ ಮಳಿಗೆ ಬಾಡಿಗೆಗೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ನಟರಾಜ್ ಒತ್ತಾಯಿಸಿದರು. ನಗರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳಿಂದ ಈವರೆಗೆ ₹1.5 ಕೋಟಿ ಬಾಡಿಗೆ ಬಾಕಿ ಇದೆ ಎಂದು ಸದಸ್ಯೆ ಶ್ಯಾಮಲಾರಾವ್ ತಿಳಿಸಿದರು.

ಮಳಿಗೆಗಳನ್ನು ಹರಾಜಿನಲ್ಲಿ ಪಡೆದವರೇ ಬಳಸಬೇಕು. ಬೇರೆಯವರು ಉಪಯೋಗಿಸುತ್ತಿದ್ದರೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಬಾಕಿ ಇರುವ ಬಾಡಿಗೆ ಹಣವನ್ನು ಸಂಗ್ರಹಿಸಲಾಗುವುದು ಎಂದು ಶಿಲ್ಪಾ ರಾಜಶೇಖರ್ ಉತ್ತರಿಸಿದರು.

ಕೋಟೆ ಕೆರೆ ಸಂಪರ್ಕಿಸುವ ರಾಜಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿವೆ. ಅದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಸೊಳ್ಳೆಗಳು ಹೆಚ್ಚಾಗಿವೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ರಾಜಕಾಲುವೆ ಸ್ವಚ್ಛಗೊಳಿಸಬೇಕು ಎಂದು ಸದಸ್ಯರೊಬ್ಬರು ಒತ್ತಾಯಿಸಿದರು.

ಐ.ಜಿ.ರಸ್ತೆ ಪಾದಚಾರಿ ಮಾರ್ಗದಲ್ಲಿ ಸ್ಲ್ಯಾಬ್‌ಗಳು ಹಾಳಾಗಿವೆ. ಪಾದಚಾರಿ ಮಾರ್ಗದ ಅಡಿ ಇರುವ ಚರಂಡಿಗೆ ಬಿದ್ದು ಹಲವರು ಕಾಲು ಮುರಿದುಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ವತಿಯಿಂದ ಶೀಘ್ರವಾಗಿ ಅದನ್ನು ಸರಿಪಡಿಸಬೇಕು ಎಂದು ಸದಸ್ಯರೊಬ್ಬರು ಒತ್ತಾಯಿಸಿದರು.

ರತ್ನಗಿರಿ ರಸ್ತೆಯ ಟೌನ್ ಕ್ಯಾಂಟೀನ್ ಬಳಿಯಿಂದ ಮೆಸ್ಕಾಂ ಕಚೇರಿ ವರೆಗೆ ಚರಂಡಿ ನಿರ್ಮಿಸಲಾಗಿದೆ. ಆದರೆ, ಅದರಲ್ಲಿನ ಸೆಂಟ್ರಿಗ್ ತೆಗೆದಿಲ್ಲ. ಅದರಿಂದ ಚರಂಡಿಯಲ್ಲಿ ನೀರು ನಿಲ್ಲುತ್ತಿದೆ ಎಂದು ಸದಸ್ಯ ಟಿ.ರಾಜಶೇಖರ್ ಆರೋಪಿಸಿದರು. ಇಪ್ಪತ್ತು ದಿನಗಳ ಒಳಗೆ ಸರಿಪಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಶಿ ಉತ್ತರಿಸಿದರು.

ಬೇಲೂರು ರಸ್ತೆ ಪೈ ಕಲ್ಯಾಣ ಮಂಟಪದ ವತಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ನಿರ್ಮಿಸಿ ಎರಡು ವರ್ಷವಾಗಿದೆ. ನಿರ್ಹವಣೆ ಮಾಡುತ್ತಿಲ್ಲ. ಮೀಡಿಯನ್ ಮಧ್ಯದಲ್ಲಿ ಎತ್ತರಕ್ಕೆ ಗಿಡಗಳು ಬೆಳೆದಿವೆ. ಮೀಡಿಯನ್ ಪಕ್ಕದಲ್ಲಿ ಮಣ್ಣು ತುಂಬಿಕೊಂಡಿದೆ. ಅದನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಲಿಖಿತವಾಗಿ ನೀಡಿ. ನಗರಸಭೆ ವತಿಯಿಂದ ನಿರ್ವಹಣೆ ಮಾಡಲಾಗುವುದು ಎಂದು ಆಯುಕ್ತೆ ಎಂ.ವಿ.ತುಷಾರ ಮಣಿ ಹೇಳಿದರು.

ರಸ್ತೆ ನಿರ್ವಹಣೆ ಮಾಡಲು ಶೀಘ್ರವಾಗಿ ಟೆಂಡರ್ ಕರೆಯಲಾಗುವುದು ಎಂದು ಎಂಜಿನಿಯರ್ ಶಶಿ ಉತ್ತರಿಸಿದರು. ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ಕವಿತಾಶೇಖರ್, ಅಪ್ಸರ್ ಅಹ್ಮದ್, ಸುಧೀರ್, ರವೀಂದ್ರನಾಥ ಪ್ರಭು, ಸುರೇಖಾ ಸಂಪತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.